
ಹೆಣ್ಣುಮಕ್ಕಳಿಗೆ ಋತುಸ್ರಾವದ ಸಂದರ್ಭದಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಈ ಸಮಯದಲ್ಲಿ ಅವಳು ನರಕಯಾತನೆ ಅನುಭವಿಸುತ್ತಾಳೆ. ಹೊಟ್ಟೆ ನೋವು, ಬೆನ್ನು ನೋವು, ವಾಂತಿ, ಅತಿಯಾದ ರಕ್ತಸ್ರಾವದಿಂದ ಬಳಲುವ ಹೆಣ್ಣಿನ ರೋಧನೆ ನೋಡಲಸಾಧ್ಯ. ತಿಂಗಳಿಗೆ ಒಮ್ಮೆ ಅವಳು ಈ ನರಕಯಾತನೆ ಅನುಭವಿಸುವುದು ಕಟ್ಟಿಟ್ಟ ಬುತ್ತಿ. ಕೆಲವರು ಇದರಿಂದ ಮುಕ್ತಿ ಪಡೆಯಲು ಇಂಗ್ಲಿಷ್ ಮಡಿಸಿನ್ಸ್ ಗಳ ಮೊರೆ ಹೋಗುತ್ತಾರೆ. ಆದರೆ, ಇಂಗ್ಲಿಷ್ ಮಡಿಸಿನ್ಸ್ ಗಳ ಬದಲಾಗಿ ಮನೆಮದ್ದನ್ನು ಉಪಯೋಗಿಸಿ ರಕ್ತಸ್ರಾವವನ್ನು ತಡೆಯಬಹುದಾಗಿದೆ. ಹಾಗಾದ್ರೆ ಅದು ಯಾವ ಮನೆಮದ್ದು ಅನ್ನುವ ಮಾಹಿತಿ ಕೊಡ್ತೀವಿ ಮುಂದೆ ಓದಿ……
ಅಡುಸೋಗೆ ಔಷಧೀಯ ಗುಣಗಳನ್ನು ಮೈತುಂಬಿಕೊಂಡಿರುವ ಸಸ್ಯ. ಉಷ್ಣ ಗುಣವನ್ನು ಹೊಂದಿದ ಈ ಸಸ್ಯ ನೆಗಡಿ, ಕೆಮ್ಮು ಮುಂತಾದ ಸಾಮಾನ್ಯ ಕಾಯಿಲೆಗಳಿಗೆ ರಾಮಬಾಣ. ಅಡುಸೋಗೆ ಸ್ವಲ್ಪ ಕಹಿಯಾದರೂ ಅಪಾರವಾದ ಔಷಧೀಯ ಗುಣವನ್ನು ಹೊಂದಿದೆ. ಈ ಸೊಪ್ಪಿನ ಇನ್ನಷ್ಟು ಪ್ರಯೋಜನಗಳನ್ನು ತಿಳಿಯೋಣ.
ಅಡುಸೋಗೆ ಎಲೆಗಳನ್ನು ನೀರಲ್ಲಿ ಕುದಿಸಿ ಕಷಾಯ ಮಾಡಿ ದಿನಕ್ಕೆ 2 ಬಾರಿ ಸೇವಿಸಿದರೆ ಗಂಟಲು ಉರಿ, ಕೆಮ್ಮು ಮತ್ತು ಹಳದಿ ಅಥವಾ ಹಸಿರು ಕಫ ಇದ್ದರೆ ಬೇಗ ಶಮನವಾಗುತ್ತದೆ. ಮೊಣಕಾಲು, ಮಂಡಿಗಳಲ್ಲಿ ಊತ, ನೋವು ಮತ್ತು ಕೆಂಪಾಗಿದ್ದರೆ ಅಡುಸೋಗೆ ಎಲೆಯನ್ನು ಎಳ್ಳೆಣ್ಣೆಯಲ್ಲಿ ಬೇಯಿಸಿ ಬಟ್ಟೆಯಲ್ಲಿಟ್ಟು ಕಟ್ಟಿದರೆ ಊತ, ನೋವು ಬೇಗ ಕಡಿಮೆಯಾಗುತ್ತದೆ.
ಇಷ್ಟೇ ಅಲ್ಲ, ಹೊಟ್ಟೆಯಲ್ಲಿ ಹುಣ್ಣಾಗಿದ್ದು ಉರಿ, ನೋವಿದ್ದರೆ ಅಡುಸೋಗೆ ಎಲೆಯ ಪುಡಿಗೆ ಜೇಷ್ಠಮದ್ದು ಪುಡಿ ಮತ್ತು ಕಲ್ಲುಸಕ್ಕರೆ ಪುಡಿ ಸೇರಿಸಿ ಸೇವಿಸಿದರೆ ಹೊಟ್ಟೆ ಹುಣ್ಣು ಗುಣವಾಗುತ್ತದೆ. ಅಡುಸೋಗೆ ಎಲೆಯ ರಸ, ಒಣದ್ರಾಕ್ಷಿ ಮತ್ತು ಅಳಲೆಕಾಯಿ ಹಣ್ಣಿನ ತಿರುಳನ್ನು ನೀರಿಗೆ ಹಾಕಿ ಕಷಾಯ ತಯಾರಿಸಿ ದಿನಕ್ಕೆ 2 ಬಾರಿ ಕುಡಿದರೆ ಮೂಗಿನಲ್ಲಿ ರಕ್ತ ಸೋರುವುದು ನಿಲ್ಲುತ್ತದೆ. ವಸಡುಗಳಲ್ಲಿ ರಕ್ತಸ್ರಾವ ಆಗುತ್ತಿದ್ದರೆ, ಅಡುಸೋಗೆ ಎಲೆಗಳನ್ನು ಪೇಸ್ಟ್ ಮಾಡಿ ವಸಡುಗಳಿಗೆ ಲೇಪ ಮಾಡಿದರೆ ರಕ್ತ ನಿಲ್ಲುತ್ತದೆ.
ಮೂತ್ರದಲ್ಲಿ ರಕ್ತ ಹೋಗುತ್ತಿದ್ದರೆ, ಅಡುಸೋಗೆ ಬೇರಿನ ಕಷಾಯವನ್ನು ಸೇವಿಸಿದರೆ ಪ್ರಯೋಜನವಿದೆ. ಋತುಸ್ರಾವ ಸಮಯದಲ್ಲಿ ಅಧಿಕ ರಕ್ತಸ್ರಾವ ಆಗುತ್ತಿದ್ದರೆ, ಅಡುಸೋಗೆ ಎಲೆ ಪುಡಿಗೆ ಅದರದೇ ಕಷಾಯ ಮತ್ತು ಕಲ್ಲುಸಕ್ಕರೆ ಬೆರೆಸಿ ಸೇವಿಸಿದರೆ ರಕ್ತಸ್ರಾವ ನಿಲ್ಲುತ್ತದೆ.
