
ಕೊಲ್ಲೂರು: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಳಾಲ ಗ್ರಾಮದ ಅಂಗಡಿಬೆಟ್ಟು ಎಂಬಲ್ಲಿ ತನ್ನ ಜಮೀನಿಗೆ ನುಗ್ಗಿದ ದನವನ್ನು ಗುಂಡಿಕ್ಕಿ ಸಾಯಿಸಿದ ಘಟನೆಯನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಬಂಜರಂಗದಳ ಬೈಂದೂರು ಪ್ರಖಂಡದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದೆ. ಈ ವೇಳೆ ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಲಾಯಿತು.
ಜೊತೆಗೆ ಗೋವುಗಳನ್ನು ಕಳೆದುಕೊಂಡಿರುವ ಸಂತ್ರಸ್ತರ ಮನೆಗಳಿಗೆ ವಿಶ್ವ ಹಿಂದೂ ಪರಿಷತ್ ನಾಯಕ ಶರಣ್ ಪಂಪ್ವೆಲ್ ನೇತೃತ್ವದ ನಿಯೋಗ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಅಲ್ಲದೇ ಪ್ರಕರಣದ ಬಳಿಕ ಆರೋಪಿ ನರಸಿಂಹ ಕುಲಾಲ್ ಎಂಬಾತನನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಕೊಲ್ಲೂರು ಠಾಣಾಧಿಕಾರಿಗೆ ಮನವಿಯನ್ನು ಸಲ್ಲಿಸಲಾಯಿತು.
ಘಟನೆ ಹಿನ್ನೆಲೆ
ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಳಾಲ ಗ್ರಾಮದ ಅಂಗಡಿಬೆಟ್ಟು ಎಂಬಲ್ಲಿ ನರಸಿಂಹ ಕುಲಾಲ್ ಎಂಬಾತ ತನ್ನ ಜಮೀನಿಗೆ ನುಗ್ಗಿದ ಪಕ್ಕದ ಮನೆಯ ಗುಲಾಬಿ ಎಂಬುವವರ ದನವನ್ನು ಗುಂಡಿಕ್ಕಿ ಸಾಯಿಸಿದ್ದನು. ಇದನ್ನು ವಿಚಾರಿಸಲು ಹೋಗಿದ್ದ ವೇಳೆ ನರಸಿಂಹ ಗುಲಾಬಿ ಮತ್ತು ಅವರ ಮನೆಯವರಿಗೂ ಕೋವಿ ತೋರಿಸಿ ಬೆದರಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ತಾನು 20 ಕ್ಕೂ ಹೆಚ್ಚು ದನಗಳಿಗೆ ಗುಂಡಿಕ್ಕಿದ್ದೇನೆ, ಅದೇ ರೀತಿ ನಿಮಗೂ ಗುಂಡು ಹಾರಿಸುತ್ತೇನೆ ಎಂದು ಹೆದರಿಸಿದ್ದಾನೆ ಎಂದು ಹೇಳಲಾಗಿದೆ.
ಇನ್ನು, ಕೊಲ್ಲೂರು ಸಮೀಪದ ಈ ಪರಿಸರದಲ್ಲಿ ನಾಲ್ಕು ದನಗಳು ಗುಂಡೇಟಿನಿಂದ ಸತ್ತಿದ್ದು, ೧೪ ದನಗಳು ಗುಂಡೇಟಿನಿಂದ ಗಾಯಗೊಂಡಿವೆ. ಇದಕ್ಕೆ ನರಸಿಂಹ ಎಂಬಾತನೇ ಕಾರಣ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಗುಲಾಬಿಯವರು ನೀಡಿದ ದೂರಿನಂತೆ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
