
ಶಿರ್ವ: ಈಜಲು ಹೋಗಿದ್ದ ಬಾಲಕನೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬೆಳಪು ಕೆಐಎಡಿಬಿ ಯೋಜನಾ ಪ್ರದೇಶದ ಕೃತಕ ಕೊಳದಲ್ಲಿ ನಡೆದಿದೆ.
ಬೆಳಪು ವಸತಿ ಕಾಲೋನಿ ನಿವಾಸಿ ಕಸ್ತೂರಿ ಎಂಬುವವರ ಪುತ್ರ ವಿಶ್ವಾಸ್ ನಾಯಕ್(11) ಮೃತ ದುರ್ದೈವಿ. ವಿಶ್ವಾಸ್ ನಾಯಕ್ ತನ್ನ ಅಕ್ಕ ಪಕ್ಕದ ಮನೆಯವರಾದ ಶಶಾಂಕ್ ಮತ್ತು ನೌಶದ್ ಅವರೊಂದಿಗೆ ಈಜು ಕಲಿಯಲು ಹೋಗಿದ್ದ ಸಂದರ್ಭ ಈ ಅವಘಡ ಸಂಭವಿಸಿದೆ.
ವಿಶ್ವಾಸ್ ನೀರಿನಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ಶಶಾಂಕ್ ಮತ್ತು ನೌಶದ್ ಕೂಗಿಕೊಂಡಿದ್ದು, ಮಕ್ಕಳ ಕೂಗನ್ನು ಕೇಳಿ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು ವಿಶ್ವಾಸ್ನನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಬಾಲಕ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
