
ಕಾರ್ಕಳ: ನಿರಂತರ ಅಪಪ್ರಚಾರದಲ್ಲಿ ತೊಡಗಿರುವವರು, ಅನುದಾನಕ್ಕೆ ತಡೆಯೊಡ್ಡುತ್ತಿರುವವರು
ಹಾಗೂ ನ್ಯಾಯಾಲಯದಿಂದ ತಡೆಯಾಜ್ಞೆ ತರಲು ಹೊರಟವರು ಕ್ಷೇತ್ರದ ಅಭಿವೃದ್ದಿಗೆ ಅಡ್ಡಿಯಾಗಿರುವ ವಿಘ್ನ ಸಂತೋಷಿಗಳು. ಕಾಂಗ್ರೆಸ್ ಮತ್ತು ಅವರ ಬಿ ಟೀಂ ಈ ಮೂರು ಕಾರ್ಯವನ್ನು ನಿರಾಯಸವಾಗಿ ಮಾಡುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸುಮಿತ್ ಕೌಡೂರು ಹೇಳಿದ್ದಾರೆ.
ವಿಧಾನ ಸಭಾ ಚುನಾವಣೆ ಹೊತ್ತಿಗೆ ಕಾರ್ಕಳಕ್ಕೆ ಬಂದು ಇಡೀ ಕ್ಷೇತ್ರವನ್ನು ಉದ್ಧಾರ ಮಾಡುವುದಾಗಿ ಹೇಳಿದ್ದ ವ್ಯಕ್ತಿ ತಮ್ಮ ಬೆಂಬಲಿಗರೊಂದಿಗೆ ಊರಿಡಿ ಅಲೆಮಾರಿಗಳಂತೆ ಅಲೆದಾಡಿ ಸಾರ್ವಜನಿಕರ ದಿಕ್ಕು ತಪ್ಪಿಸಿ,ಅಪಪ್ರಚಾರದಲ್ಲಿ ತೊಡಗಿಸಿಕೊಂಡರು.ಚುನಾವಣೆ ಮುಗಿದ ಬಳಿಕ ಅವರು ನಾಪತ್ತೆಯಾಗಿದ್ದಾರೆ. ಹೊರಗೆ ನಿಂತು ಅಭಿವೃದ್ದಿಗೆ ನ್ಯಾಯಲಯದಿಂದ ತಡೆಯಾಜ್ಞೆ ತರಲು ಹೊರಟಿದ್ದಾರೆ. ಅವರು ಮತ್ತವರ ಬೆಂಬಲಿಗರು ಕ್ಷೇತ್ರದ ಜನರ ಕ್ಷಮೆಯಾಚಿಸಬೇಕು ಎಂದಿದ್ದಾರೆ.
ಕಾಂಗ್ರೆಸ್ ಇದೇ ಬಿ ಟೀಂಗೆ ಸಂಪನ್ಮೂಲ ಒದಗಿಸಿತ್ತು. ಅದೇ ಅಪಪ್ರಚಾರದ ಕೆಲಸವನ್ನು ಕಾಂಗ್ರೆಸ್ ಅವತ್ತು ಮಾಡಿತ್ತು ಈಗಲೂ ಮುಂದುವರೆಸುತ್ತಿದೆ. ಥೀಂ ಪಾರ್ಕ್ ಪೂರ್ಣಗೊಳಿಸವುದಕ್ಕೆ ಅನುದಾನ ಬಿಡುಗಡೆಗೆ ಪ್ರಯತ್ನಿಸದೆ, ಅನುದಾನಕ್ಕೆ ತಡೆಯೊಡ್ಡುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಇಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಕಾಂಗ್ರೆಸ್ ಮೊದಲಿನಿಂದಲೂ ಅಭಿವೃದ್ದಿ ವಿರೋಧಿ. ಅದೇ ಕೆಲಸವನ್ನು ಅದು ಚಾಚು ತಪ್ಪದೆ ಪಾಲಿಸುತ್ತಲೇ ಬಂದಿದೆ. ಈಗಲೂ ಅದನ್ನೇ ಮಾಡುತ್ತಿದೆ ಎಂದರು.
