Home ಸುದ್ದಿಗಳು ಒಂದು ಕೋಟಿ ಜನರಿಂದ ಭಗವದ್ಗೀತೆ‌ ಬರೆಸುವ‌ ಸಂಕಲ್ಪ ನಮ್ಮದು: ಪುತ್ತಿಗೆ ಸುಗುಣೇಂದ್ರ ಶ್ರೀ

ಒಂದು ಕೋಟಿ ಜನರಿಂದ ಭಗವದ್ಗೀತೆ‌ ಬರೆಸುವ‌ ಸಂಕಲ್ಪ ನಮ್ಮದು: ಪುತ್ತಿಗೆ ಸುಗುಣೇಂದ್ರ ಶ್ರೀ

0
ಒಂದು ಕೋಟಿ ಜನರಿಂದ ಭಗವದ್ಗೀತೆ‌ ಬರೆಸುವ‌ ಸಂಕಲ್ಪ ನಮ್ಮದು: ಪುತ್ತಿಗೆ ಸುಗುಣೇಂದ್ರ ಶ್ರೀ

ಉಡುಪಿ: ದೇವರಿಗೆ ಪೂಜೆ, ದೀಪ, ಧೂಪ, ನೈವೇದ್ಯ ಸಮರ್ಪಣೆ ಹೊರತಾಗಿ ಪ್ರತಿಯೊಬ್ಬರೂ ಆಂತರಿಕವಾಗಿ ಭಗವದ್ ಚಿಂತನೆ ನಡೆಸಬೇಕು ಎಂದು ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದ್ದಾರೆ.

ಅವರು ಪುತ್ತಿಗೆ ಮಠದ ಸಭಾಂಗಣದಲ್ಲಿ ಪರ್ಯಾಯ ಪೂರ್ವಭಾವಿ‌ ಧಾನ್ಯ ಮುಹೂರ್ತದ ಪ್ರಯುಕ್ತ ನಡೆದ‌ ಧಾರ್ಮಿಕ ಸಭೆಯಲ್ಲಿ ಬುಧವಾರ ಆಶೀರ್ವಚನ ನೀಡಿದರು. ಈ ಬಾರಿಯದ್ದು ವಿಶ್ವ ಗೀತಾ ಪರ್ಯಾಯ ಎಂದು ಘೋಷಿಸಿದ ಶ್ರೀಗಳು, ದೇವರ ಪೂಜೆಯ ಸಂಕಲ್ಪ, ಪೂರ್ಣತೆ ನಡುವೆ ಒಂದೊಂದು ಫಲವಿದೆ. ಪ್ರತಿಯೊಬ್ಬರಿಗೂ‌ ದೇವರ ಪೂಜೆ, ಅನುಗ್ರಹದ ಅಪೇಕ್ಷೆಯಿದ್ದರೂ ಜಗತ್ತಿಗೆ ಭಗವಂತನ ಅನುಗ್ರಹದ ಫಂಡ್ ಬಂದರೆ ಎಲ್ಲವೂ ಸುಲಲಿತ ಎಂದರು.

ಮನುಷ್ಯ ಯತ್ನದ ಜತೆಗೆ ದೇವರ ಅನುಗ್ರಹಬೇಕು. ವೈಯಕ್ತಿಕಕ್ಕಿಂತ ಜಗದ ಶ್ರೇಯಸ್ಸಿನ ಪೂಜೆಯೇ ಪರ್ಯಾಯ. ಒಂದು ಕೋಟಿ ಜನರಿಂದ ಭಗವದ್ಗೀತೆ‌ ಬರೆಸುವ‌ ಸಂಕಲ್ಪ ನಮ್ಮದು, ಅದನ್ನು ಈಡೇರಿಸಲು‌ ಶ್ರೀಕೃಷ್ಣನಿದ್ದಾನೆ. ಜಗತ್ತಿನ ಮೂಲೆ ಮೂಲೆಯಲ್ಲೂ ಗೀತಾ ಪ್ರಚಾರವಾಗಿದೆ. ಪರ್ಯಾಯದಲ್ಲಿ‌ ದೇವರ ಸೇವೆ ಜತೆಗೆ ಭಕ್ತರ ಸೇವೆಯ ಅವಕಾಶ ಉಡುಪಿ ಜನರಿಗಿದೆ ಎಂದರು.

ಸಂಸ್ಕೃತಿ, ಸಂಸ್ಕಾರ ಉಳಿಸಿ: ಡಾ.ಹೆಗ್ಗಡೆ

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಮಾತನಾಡಿ, ಶ್ರೀಕೃಷ್ಣ ಬೋಧಿಸಿದ ಗೀತಾ‌ಸಾರವನ್ನು ಜಗತ್ತಿಗೆ ಉಣಿಸಿ ಧರ್ಮ, ಸಂಸ್ಕೃತಿ, ಸಂಸ್ಕಾರದ ಉಳಿವಿಗೆ ಆದ್ಯ ಗಮನ ಅಗತ್ಯ.
ಪರ್ಯಾಯ‌ ಸಂಸ್ಕಾರ ವಿದ್ಯಾರ್ಥಿ, ಯುವಜನರಿಗೆ ತಲುಪಬೇಕು. ಭಗವಂತನ ಸೇವೆಯಿಂದ ಸಂತೃಪ್ತಿ ಪಡೆಯಬೇಕು. ಹೊರೆಕಾಣಿಕೆ ವರ್ಷಕ್ಕಾಗುವಷ್ಟು ಸಂಗ್ರಹವಾಗಲಿ. ಪರ್ಯಾಯ ನದಿಯಲ್ಲಿ ನಾವೆಲ್ಲರೂ ಮಿಂದು ಪುನೀತರಾಗೋಣ. ದೇಶ, ಜಗತ್ತಿಗೆ‌ ಸುಭಿಕ್ಷೆಯಾಗಲಿ.‌ ವಿದೇಶಕ್ಕೆ ಹೋಗಿದ್ದಾಗ ಕೃಷ್ಣಮಂದಿರದಲ್ಲಿ ಇಂಗ್ಲೀಷ್‌ ಸತ್ಯನಾರಾಯಣ‌ ಪೂಜೆ ಮೂಲಕ ಧಾರ್ಮಿಕತೆಯ ಪ್ರಸಾರ ಖುಷಿ ಕೊಟ್ಟಿತು ಎಂದರು.

ಪರ್ಯಾಯ‌‌ ಸ್ವಾಗತ ಸಮಿತಿ ಅಧ್ಯಕ್ಷ ಡಾ.ಎಚ್.ಎಸ್.ಬಲ್ಲಾಳ್, ಪೌರಾಯುಕ್ತ ರಾಯಪ್ಪ, ಪ್ರಸಾದ್ ರಾಜ್ ಕಾಂಚನ್, ಉದ್ಯಮಿ ಪುರುಷೋತ್ತಮ ಶೆಟ್ಟಿ, ಭುವನೇಂದ್ರ ಕಿದಿಯೂರು, ಶ್ರೀರಮಣ ಉಪಾಧ್ಯ, ಸೂರ್ಯನಾರಾಯಣ ಉಪಾಧ್ಯ ಕುಂಭಾಶಿ, ಕರ್ನಾಟಕ ಬ್ಯಾಂಕ್ ನಿರ್ದೇಶಕ ಬಾಲಕೃಷ್ಣ ಅಲ್ಸೆ ಉಪಸ್ಥಿತರಿದ್ದರು.

ಡಾ.ಉಷಾ ಪಲ್ಲವಿ ಬಲ್ಲಾಳ್ ಪ್ರಾರ್ಥಿಸಿದರು. ಮಠದ ದಿವಾನ ನಾಗರಾಜ ಆಚಾರ್ಯ ಸ್ವಾಗತಿಸಿದರು. ಪರ್ಯಾಯ‌ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಕೆ. ರಘುಪತಿ ಭಟ್ ಪ್ರಾಸ್ತಾವಿಕ ಮಾತನ್ನಾಡಿದರು.
ರಮೇಶ್ ಭಟ್ ಕೆ.‌ ನಿರೂಪಿಸಿದರು. ಬೆಳಪು ದೇವಿಪ್ರಸಾದ್ ಶೆಟ್ಟಿ‌ ವಂದಿಸಿದರು. ಡಾ.ಅರ್ಚನಾ ನಂದ ಕುಮಾರ್ ರಚಿತ ಕೃತಿಯನ್ನು ಯೂಟ್ಯೂಬ್ ಮೂಲಕ ಶ್ರೀಪಾದರು ಬಿಡುಗಡೆ ಮಾಡಿದರು.

ಅತಿಥಿಗಳಿಗೆ ಮನೆ ಆತಿಥ್ಯ
ಪರ್ಯಾಯ‌ ಸ್ವಾಗತ‌ ಸಮಿತಿ ಕಾರ್ಯಾಧ್ಯಕ್ಷ ಕೆ.ರಘುಪತಿ ಭಟ್ ಮಾತನಾಡಿ, ಹಿಂದೂ‌ಸಂಸ್ಕೃತಿ, ಮಾಧ್ವ ಪರಂಪರೆಯ‌ ಪ್ರಚಾರದೊಂದಿಗೆ ವಿದೇಶದಲ್ಲಿ 15 ಕೃಷ್ಣ ಮಂದಿರ ಸ್ಥಾಪನೆ ಹಿನ್ನೆಲೆಯಲ್ಲಿ ಪುತ್ತಿಗೆ ಪರ್ಯಾಯ‌ ವಿಶ್ವ ಪರ್ಯಾಯ. ಪರ್ಯಾಯವೇರುವ ಮೊದಲು ತೀಥ್೯ಸ್ನಾನ ಕೈಗೊಳ್ಳುವ ಕಾಪು ದಂಡತೀರ್ಥದಿಂದ ತೊಡಗಿ ವಿದ್ಯುದಲಂಕಾರ, ನಗರಾಲಂಕಾರಕ್ಕೆ ಸಿದ್ಧತೆ ನಡೆದಿದೆ. ನಗರದ 10ಕಿ.ಮೀ. ವ್ಯಾಪ್ತಿಯ ಮನೆಮಂದಿ ಒಂದಿಬ್ಬರು ಅತಿಥಿಗಳಿಗೆ ಆತಿಥ್ಯದ ಹೊಣೆ ಹೊರಲು ಹೆಸರು ನೋಂದಾಯಿಸಬಹುದು ಎಂದರು.

ಶ್ರೀಕೃಷ್ಣನಿಗೆ ನವಧಾನ್ಯ ಸಮರ್ಪಣೆ
ಧಾನ್ಯ ಮುಡಿಗಳ ನಡುವೆ ಪೀಠಾಸೀನರಾಗಿದ್ದ ಪುತ್ತಿಗೆ ಶ್ರೀಗಳ ಮಾರ್ಗದರ್ಶನದಲ್ಲಿ ನವಗ್ರಹ ಚಿಂತನೆಯಿಂದ ಅತಿಥಿಗಳು ತಟ್ಟೆಗೆ ನವ ಧಾನ್ಯ ಸಮರ್ಪಿಸಿ ನವಗ್ರಹ‌ಚಿಂತನೆಯೊಂದಿಗೆ ಶ್ರೀಕೃಷ್ಣನಿಗೆ ಅರ್ಪಿಸಲಾಯಿತು. ಶ್ರೀಧರ ಉಪಾಧ್ಯ ನವಗ್ರಹ‌ಸ್ತೋತ್ರ ಪಠಿಸಿದರು.

ವೈಶಿಷ್ಟ್ಯಪೂರ್ಣ ಆಹ್ವಾನ ಪತ್ರಿಕೆ ಬಿಡುಗಡೆ

ಪುತ್ತಿಗೆ ಪರ್ಯಾಯ 2024-26 ಆಹ್ವಾನ ಪತ್ರಿಕೆ ಪುತ್ತಿಗೆ ಶ್ರೀಗಳ‌ ವಿಶೇಷ ಮುತುವರ್ಜಿಯಿಂದ ವಿಶಿಷ್ಟವಾಗಿ ರೂಪುಗೊಂಡಿದ್ದು ಬಿಡುಗಡೆ ಮಾಡಲಾಯಿತು. ಶ್ರೀಕೃಷ್ಣನ ಅನುಗ್ರಹ ಪತ್ರವಾಗಿ ಒಂದು ಲಕ್ಷ ಜನರಿಗೆ ಆಹ್ವಾನ ಪತ್ರ ತಲುಪಿಸುವ ಗುರಿಯಿದೆ ಎಂದು ಶ್ರೀಗಳು ನುಡಿದರು. ಕನ್ನರ್ಪಾಡಿ ಶ್ರೀಜಯದುರ್ಗಾಪರಮೇಶ್ವರಿ ದೇವಳದ‌ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಘವೇಂದ್ರ‌ಭಟ್ ಅವರಿಗೆ ಹೊರೆ ಕಾಣಿಕೆ ಸಮರ್ಪಣೆ‌ ಬ್ಯಾನರ್ ಹಸ್ತಾಂತರಿಸಲಾಯಿತು.

 

LEAVE A REPLY

Please enter your comment!
Please enter your name here