
ಉಡುಪಿ: ರಾಮ ಮಂದಿರ ನಿರ್ಮಾಣ ನಮ್ಮ ಶತಮಾನಗಳ ಕನಸು. ಮಂದಿರ ನಿರ್ಮಾಣ ಆದ ಕೂಡಲೇ ನಮ್ಮ ಜವಾಬ್ದಾರಿ ಮುಗಿಯಿತೆಂದಲ್ಲ. ಮಂದಿರ ಮಂದಿರವಾಗಿ ಉಳಿಯಬೇಕು. ನಾವು ಹಿಂದುಗಳಾಗಿ ಉಳಿದರೆ ಮಾತ್ರ ಮಂದಿರ ಮಂದಿರವಾಗಿ ಉಳಿಯುತ್ತೆ. ಅಂದರೆ ನಮ್ಮ ಸಂತತಿ ಉಳಿಯಬೇಕು. ನಮ್ಮ ಮಕ್ಕಳಿಗೆ ಉತ್ತಮವಾದ, ಉದ್ದಾತ್ತವಾದ ಸಂಸ್ಕಾರ ಕೊಟ್ಟರೆ ಮಾತ್ರ ಉಳಿಯುತ್ತೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ತೀರ್ಥ ಶ್ರೀಪಾದರ ಷಷ್ಟ್ಯಬ್ದ ಅಭಿವಂದನ ಸಮಾರಂಭದಲ್ಲಿ ಅಭಿವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಟ್ಟಿಲ್ಲ ಎಂದರೆ ಹಿಂದೂ ಸಂಸ್ಕೃತಿಗೆ ಸಮಸ್ಯೆ ಎದುರಾಗಬಹುದು. ಹೀಗಾಗಿ ಮಕ್ಕಳ ಮೂಲಕ ಸಂಸ್ಕೃತಿ ಉಳಿಸುವ ಕಾರ್ಯ ನಿರಂತರ ನಡೆಯಬೇಕು. ಮಂದಿರ ಮಾತ್ರವಲ್ಲ ನಮ್ಮ ರಾಮ ರಾಜ್ಯದ ಕನಸು ನನಸಾಗಬೇಕು. ರಾಮಭಕ್ತರೆಲ್ಲ ದೇಶಭಕ್ತರಾಗಬೇಕು. ಕಟ್ಟಿದ ಮಂದಿರ ಉಳಿಸಬೇಕು ಎಂದರು ಅವರು ತಿಳಿಸಿದರು.
ಪರ್ಯಾಯ ಶ್ರೀ ವಿದ್ಯಾಸಾಗರ ಶ್ರೀಪಾದರು ಮಾತನಾಡಿ, ಪೇಜಾವರ ಶ್ರೀಗಳ ಷಷ್ಟ್ಯಬ್ದ ಉಡುಪಿಯಲ್ಲಿ ನಡೆಯುತ್ತಿರುವ ಅತ್ಯುತ್ತಮ ಕಾರ್ಯಕ್ರಮ. ಅದಕ್ಕೊಂದು ವೈಶಿಷ್ಟ್ಯ ಇದೆ. ಪೇಜಾವರ ಮಠ ಸಾಮಾಜಿಕ ರಂಗದ ಕಾರ್ಯಗಳು ಬಹಳ ಹಿಂದಿನಿಂದಲೇ ನಡೆಯುತ್ತಿದೆ. ಪೇಜಾವರ ಮಠದವರು ಅವರ ಗುರುಗಳ ಕಾಲದಿಂದಲೂ ಅವರು ಸಾರ್ವಜನಿಕವಾಗಿದ್ದಾರೆ. ಹೀಗಾಗಿ ಅವರು ಈ ಅಭಿನಂದನೆ ಸ್ವೀಕರಿಸುವ ಎದೆಗಾರಿಕೆ ಅವರಲ್ಲಿದೆ. ಉಡುಪಿಯ ಹೆಸರನ್ನು ದೇಶವ್ಯಾಪಿ ಪ್ರಸಿದ್ಧಿ ಪಡಿಸುತ್ತಾರೆ ಎಂದರು.
ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ಶ್ರೀಪಾದರು ಮಾತನಾಡಿ, ವಿಶ್ವ ಪ್ರಸನ್ನ ಶ್ರೀಪಾದರಲ್ಲಿ ಹನುಮಂತನ ಧೈರ್ಯ, ಸ್ಥೈರ್ಯ ಎಲ್ಲವೂ ವಿಶ್ವಪ್ರಸನ್ನ ಶ್ರೀಗಳಲ್ಲಿದೆ. ಯಾವುದೇ ಸಂದರ್ಭದಲ್ಲಿ ಅವರು ಭಯಗೊಳ್ಳುವವರಲ್ಲ. ಅರವತ್ತರ ವಯಸ್ಸಿನಲ್ಲಿ ಹತ್ತು ವರ್ಷದವರಂತೆ ಚುರುಕಾಗಿರುತ್ತಾರೆ. ಗುರುಗಳಾಗಿದ್ದ ವಿಶ್ವೇಶ ತೀರ್ಥರ ಅವಹನೆ ಅವರಲ್ಲಾಗಿದೆ. ಪೂರ್ಣ ಪ್ರಮಾಣದಲ್ಲಿ ಅವರು ಸಾಮಾಜಿಕವಾಗಿ ತೊಡಗಿಸಿಕೊಂಡಿದ್ದಾರೆ ಎಂದರು.
ಪಲಿಮಾರು ಮಠದ ವಿದ್ಯಾದೀಶ ಶ್ರೀಪಾದರು ಆಶೀರ್ಚನ ನೀಡಿದರು. ವಿದ್ವಾನ್ ಗೋಪಾಲ ಜೋಯಿಸ ಇವರ್ತ್ತೂರು, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕೊಡ್ಗಿ, ಮಾಜಿ ಶಾಸಕ ಕೆ.ರಘುಪತಿ ಭಟ್, ಮಾಜಿ ಸಚಿವ ನಾಗರಾಜ ಶೆಟ್ಟಿ, ಉದ್ಯಮಿ ಅಜಯ ಪಿ. ಶೆಟ್ಟಿ, ನಾಗರಾಜ್ ಬಲ್ಲಾಳ್, ದಯಾನಂದ ಕೆ. ಸುವರ್ಣ ಉಪಸ್ಥಿತರಿದ್ದರು. ಉಡುಪಿ ಶಾಸಕ ಯಶ್ ಪಾಲ್ ಸ್ವಾಗತಿಸಿದರು. ವಾಸುದೇವ ಭಟ್ ಪೆರಂಪಳ್ಳಿ ನಿರೂಪಿಸಿದರು.
