
ಉಡುಪಿ: ಮಣಿಪಾಲದ ತಪೋವನ ಲೈಫ್ ಸ್ಪೇಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಆಯುಷ್ ಇಲಾಖೆ ಸಹಭಾಗಿತ್ವದಲ್ಲಿ ಮಣಿಪಾಲದ ಆದರ್ಶ ನಗರದ ಪ್ರಗತಿ ಪ್ರೈಡ್ ನಲ್ಲಿರುವ ತಪೋವನ ಸಂಸ್ಥೆಯಲ್ಲಿ ಜನವರಿ 12 ರಿಂದ 14ರವರೆಗೆ “ಸ್ವಾಸ್ಥ್ಯ ರಕ್ಷಣಂ” ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಬಗ್ಗೆ ಬುಧವಾರ ತಪೋವನದ ವೈದ್ಯಾಧಿಕಾರಿ ಡಾ. ವಾಣಿಶ್ರೀ ಐತಾಳ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಜನವರಿ 12ರಂದು ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು, ಮಣಿಪಾಲ ಕೆಎಂಸಿಯ ನೇತ್ರ ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ.ಸುಲತಾ ಭಂಡಾರಿ ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಆಯುಷ್ ಅಧಿಕಾರಿ ಡಾ. ಸತೀಶ್ ಆಚಾರ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪೂರ್ಣಿಮ ಉಪಸ್ಥಿತರಿರಲಿದ್ದಾರೆ ಎಂದರು.
ಉದ್ಘಾಟನೆ ಬಳಿಕ “ಧ್ಯಾನ ಕಾರ್ಯಗಾರ” “ರೇಖಿ ಕಾರ್ಯಾಗಾರ” ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ರೇಣುಕಾ ಮಾತೆ ತೊಗಲು ಗೊಂಬೆ ಮೇಳ ಕಲಾತಂಡ ಚಿಕ್ಕಮಗಳೂರು ಇವರಿಂದ “ಇಂದ್ರಜಿತು ಕಾಳಗ” ಬೊಂಬೆಯಾಟ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.
ಜನವರಿ 13ರಂದು ಡಾ.ವಿರೂಪಾಕ್ಷ ದೇವರಮನೆ ಅವರಿಂದ ” ಸ್ವಲ್ಪ ಮಾತಾಡಿ ಪ್ಲೀಸ್”, “ವೈದ್ಯಕೀಯ ಜ್ಯೋತಿಷ್ಯ” “ನವಗ್ರಹ ವನ” “ಮನೆ ಮದ್ದು ” “ಡಿಜಿಟಲ್ ಡಿ ಟಾಕ್ಸ್ ” ” ಆಯುರ್ವೇದ ಮತ್ತು ಆಹಾರ ಕ್ರಮ” ಕಾರ್ಯಗಾರ ನಡೆಯಲಿದೆ. ಪ್ರಮುಖ ಸಂಪನ್ಮೂಲ ವ್ಯಕ್ತಿಗಳು ಈ ಕಾರ್ಯಗಾರದಲ್ಲಿ ಭಾಗವಹಿಸಲಿದ್ದಾರೆ.
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಸುಬ್ರಮಣ್ಯ ಯಕ್ಷಗಾನ ಕಲಾ ಮಂಡಳಿ ಉಡುಪಿ ಇವರಿಂದ “ಮಧುರಾ ಮಹೀಂದ್ರ” ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದರು. ಜನವರಿ 14 ರಂದು “ಕನ್ನಡ ಸಾಹಿತ್ಯ ಮತ್ತು ಪಾಕಶಾಸ್ತ್ರ” “ವೆಲ್ ನೆಸ್ ಟೂರಿಸಂ” “ಸೌಂಡ್ ಹೀಲಿಂಗ್” “ಡಯಾಬಿಟಿಸ್ ರಿವರ್ಸಲ್” ಕಾರ್ಯಗಾರ ನಡೆಯಲಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಮಹೇಶ್ ಐತಾಳ್, ರೇವತಿ ನಾಡಿಗೇರ್, ಯು. ವೆಂಕಟೇಶ್ ಉಪಸ್ಥಿತರಿದ್ದರು.
