
ಉಡುಪಿ: ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆಗೆ ದಿನದಂದೆ ಉಡುಪಿ ಪೇಜಾವರ ಮಠದ ಅಧೀನದ ಗೋಶಾಲೆಯಲ್ಲಿ ಶ್ರೀರಾಮ ಜನನವಾಗಿದೆ. ಮಠದ ಸಮೀಪದಲ್ಲಿರುವ, ಮಠದ ಕೊಟ್ಟಾರಿ ಸಂತೋಷ ಭಟ್ಟರ ಮೇಲ್ವಿಚಾರಣೆಯಲ್ಲಿರುವ ಗೋಶಾಲೆಯಲ್ಲಿ ಕಪಿಲೆ ಹಸುವೊಂದು ಇಂದು ಸಂಜೆ ಗೋಧೂಳಿ ಮುಹೂರ್ತದಲ್ಲಿ ಗಂಡು ಕರುವಿಗೆ ಜನ್ಮ ನೀಡಿದೆ.
ಜನ್ಮಭೂಮಿ ಆಂದೋಲನದಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ ಶ್ರೀಮಠದ ಪರಂಪರೆಯಲ್ಲಿ ಅದ್ವಿತೀಯವೆನಿಸುವ ದಾಖಲೆಯ ಪಂಚ ಶ್ರೀ ಕೃಷ್ಣ ಪೂಜಾ ಪರ್ಯಾಯ ನಡೆಸಿದ ಪ್ರಾತಃ ಸ್ಮರಣೀಯ ಶ್ರೀ ಶ್ರೀ ವಿಶ್ವೇಶತೀರ್ಥ ಗುರುಗಳನ್ನು ದೇಶಕ್ಕೆ ದೇಶವೇ ಸ್ಮರಿಸುತ್ತಿದೆ. ಇನ್ನೊಂದು ಕಡೆ ಅವರ ಪ್ರಿಯ ಶಿಷ್ಯ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಮಂದಿರದ ಟ್ರಸ್ಟಿಯಾಗಿ ಅಹರ್ನಿಶಿ ಶ್ರಮಿಸುತ್ತಿದ್ದಾರೆ. ಅದೇ ಹೊತ್ತಲ್ಲಿ ಕಾಕತಾಳೀಯವೆಂಬಂತೆ ಗಂಡು ಕರುವಿನ ಜನ್ಮವಾಗಿರುವುದು. ಶ್ರೀ ವಿಶ್ವಪ್ರಸನ್ನ ತೀರ್ಥ ಗುರುಗಳಿಗೆ ಮಠದ ಅಧಿಕಾರಿಗಳು ಸಿಬ್ಬಂದಿಗಳಿಗೆ ಸಂತಸ ತಂದಿದೆ.
