
ಉಡುಪಿ: ವಿದ್ಯುತ್ ವ್ಯತ್ಯಯ ಉಂಟಾಗಿ ಲಿಫ್ಟ್ ಸ್ಥಗಿತಗೊಂಡು ಹಿರಿಯ ನಾಗರಿಕರು ಸೇರಿದಂತೆ ನಾಲ್ವರು ಅರ್ಧಗಂಟೆಗಳ ಕಾಲ ಲಿಫ್ಟ್ನಲ್ಲಿ ಸಿಲುಕಿಕೊಂಡಿರುವ ಆತಂಕಕಾರಿ ಘಟನೆ ಉಡುಪಿ ತಾಲೂಕು ಪಂಚಾಯತ್ ಕಟ್ಟಡದ ಸಂಕೀರ್ಣದಲ್ಲಿ ನಡೆದಿದೆ.
ಜನರೇಟರ್ ಹಾಗೂ ತುರ್ತುನಿರ್ಗಮನದ ವ್ಯವಸ್ಥೆ ಇಲ್ಲದಿರುವುದು, ಲಿಫ್ಟ್ ನ ಸರಿಯಾದ ನಿರ್ವಹಣೆ ಇಲ್ಲದಿರುವುದೇ ಈ ಘಟನೆಗೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ. ಸರ್ಕಾರಿ ಕೆಲಸಕ್ಕೆಂದು ಕಚೇರಿಗೆ ಬರುವ ಜನತೆ ಬೆಳಿಗ್ಗಿನಿಂದ ಸಂಜೆಯವರೆಗೆ ಲಿಫ್ಟ್ ನ ಬಳಕೆ ಮಾಡುತ್ತಾರೆ. ಆಕಸ್ಮಿಕವಾಗಿ ತಾಂತ್ರಿಕ ದೋಷ ಉಂಟಾದಲ್ಲಿ ಲಿಫ್ಟ್ ನ ಒಳಗಿದ್ದವರು ಆತಂಕದಿಂದ ಕಾಲಕಳೆಯುವ ಸನ್ನಿವೇಶ ಇಲ್ಲಿ ಸೃಷ್ಟಿಯಾಗಿದೆ.
ಈ ಬಗ್ಗೆ ತೊಂದರೆಗೊಳಗಾದ ವಿಶ್ವಕುಮಾರ್ ಭಟ್ ಅವರು ಉಡುಪಿ ತಹಶೀಲ್ದಾರ್ ಅವರಿಗೆ ಲಿಖಿತ ರೂಪದಲ್ಲಿ ದೂರು ನೀಡಿದ್ದು, ಉಡುಪಿ ತಾಲೂಕು ತಹಶೀಲ್ದಾರ್ ಅವರು ಲಿಫ್ಟ್ ನಿರ್ವಹಣೆಯ ಬಗ್ಗೆ ಕೂಡಲೇ ವಿಶೇಷ ಕಾಳಜಿ ವಹಿಸಿ ಮುಂದೆಂದೂ ಇಂತಹ ದುರ್ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
