
ಆಂಧ್ರಪ್ರದೇಶ:ಇಲ್ಲಿನ ಮುಖ್ಯ ಮಂತ್ರಿಯಾಗಿ ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು ಪ್ರಮಾಣ ವಚನ ಸ್ವೀಕರಿಸುವ ಮೂಲಕ ನಾಲ್ಕನೇ ಬಾರಿಗೆ ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪುಣ್ಯಕ್ಷೇತ್ರ ತಿರುಪತಿಗೆ ಭೇಟಿ ನೀಡಿ ತಿಮ್ಮಪ್ಪನಿಗೆ ವಿಶೇಷ ಪೂಜೆ ಮಾಡಿ ಆಶೀರ್ವಾದ ಪಡೆದರು. ಇದೇ ವೇಳೆ ಅವರು ತಿರುಮಲ ದೇವಸ್ಥಾನ ಹಿಂದೂಗಳಿಗೆ ಸೇರಿದ್ದು, ಇಲ್ಲಿ ಓಂ ನಮೋ ವೆಂಕಟೇಶಾಯ ಘೋಷಣೆ ಮಾತ್ರ ಕೇಳಿಬರಬೇಕು ಎಂದು ಚಂದ್ರಬಾಬು ನಾಯ್ಡು ಹೇಳಿಕೆ ನೀಡಿದ್ದಾರೆ.
ಶುದ್ದೀಕರಣ ಕಾರ್ಯ ತಿರುಮಲದಿಂದಲೇ ಪ್ರಾರಂಭ
ಈ ಹಿಂದಿನ ಸರ್ಕಾರದಲ್ಲಿ ಈ ಕ್ಷೇತ್ರದಲ್ಲಿ ಸಾಕಷ್ಟು ಅನಾಚಾರಗಳು ನಡೆದಿವೆ. ನಮ್ಮ ಸರ್ಕಾರದ ಶುದ್ಧೀಕರಣ ಕಾರ್ಯ ಇಲ್ಲಿಂದಲೇ ಆರಂಭಿಸುತ್ತೇವೆ. ಅನ್ಯಧರ್ಮೀ ಯರಿಗೆ ಆಡಳಿತ ಮಂಡಳಿಯಲ್ಲಿ ಅವಕಾಶ ನೀಡ ಲಾಗುತ್ತಿದೆ ಎಂಬ ಆರೋಪಗಳಿಂದ ವಿವಾದಕ್ಕೆ ಒಳಗಾಗಿರುವ ತಿರುಮಲ ತಿರುಪತಿ ದೇವಸ್ಥಾನವನ್ನು ಸ್ವಚ್ಛ ಗೊಳಿಸುವುದಾಗಿ, ತಿರುಮಲದಲ್ಲಿ ಹಿಂದೂ ಧರ್ಮ ಕಾಪಾಡುವುದಾಗಿ ಚಂದ್ರಬಾಬು ನಾಯ್ಡು ಘೋಷಣೆ ಮಾಡಿದ್ದಾರೆ.
ಹಿಂದೂ ಧರ್ಮ ರಕ್ಷಣೆ ಕಾಪಾಡುವುದೇ ತಂತ್ರ
ತಿರುಮಲವನ್ನು ಕೆಲವರು ಹಣ ಗಳಿಕೆ ಮಾಡುವ, ಭಕ್ತರಿಂದ ಸುಲಿಗೆ ಮಾಡುವ, ಕಾಳಸಂತೆಯಲ್ಲಿ ಟಿಕೆಟ್ ಮಾರಾಟ ಮಾಡುವ ಅವಕಾಶ ನೀಡಿದ್ದರು. ಆದರೆ ನಮ್ಮ ಸರ್ಕಾರದಲ್ಲಿ ಇಂತಹ ಅನಾಚಾರಗಳಿಗೆ ಅವಕಾಶ ಇರೋದಿಲ್ಲ. ಇಲ್ಲಿ ಭ್ರಷ್ಟಾಚಾರವನ್ನು ಕೊನೆಗೊಳಿಸಿ ಹಿಂದೂ ಧರ್ಮ ರಕ್ಷಣೆ ಮಾಡುವುದೇ ತಂತ್ರ, ಅಪರಾಧಗಳನ್ನು ಎಂದಿಗೂ ಇಲ್ಲಿ ಸಹಿಸಲಾಗದು ಎಂದರು.
ಬಡತನ ಮುಕ್ತ ಸಮಾಜ
ಆಂಧ್ರ ಪ್ರದೇಶ ನಂಬರ್ ಒನ್ ಬಡತನ ಮುಕ್ತ ಸಮಾಜ ಹಾಗೂ ಆಂಧ್ರಪ್ರದೇಶವನ್ನು ಭಾರತದ ನಂಬರ್ ಒನ್ ರಾಜ್ಯವನ್ನಾಗಿ ಮಾಡಲು ಶ್ರಮ ಪಡುವುದಾಗಿ ಪ್ರತಿಜ್ಞೆ ಮಾಡಿದರು. ಇಲ್ಲಿನ ಆಡಳಿತದಲ್ಲಿ ಹೊಣೆಗಾರಿಕೆ ಮತ್ತು ಪಾರದರ್ಶಕತೆ ತರುವುದಾಗಿ ತಿಳಿಸಿದರು. ಕೇವಲ ಸಂಪತ್ತನ್ನು ಸೃಷ್ಟಿಸುವುದಷ್ಟೇ ನನ್ನ ಗುರಿಯಲ್ಲ, ಅದನ್ನು ಬಡವರಿಗೂ ಹಂಚುವುದು ನನ್ನ ಉದ್ದೇಶ. ಬಡತನದಿಂದ ಮುಕ್ತಗೊಳಿಸುವುದಕ್ಕೆ ನಾನು ಯಾವಾಗಲೂ ಕೆಲಸ ಮಾಡುತ್ತೇನೆ ಎಂದು ನಾಯ್ಡು ಹೇಳಿದರು.
