
ಹೈದರಾಬಾದ್: ಮಲಯಾಳಂ ಚಿತ್ರರಂಗದ ಖ್ಯಾತ ನಟ ವಿನಾಯಕನ್ ಅವರನ್ನು ಬಂಧಿಸಿದ ಘಟನೆ ಹೈದರಾಬಾದ್ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ವಿಮಾನ ನಿಲ್ದಾಣದ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನುವ ಮಾಹಿತಿಯ ಮೇರೆಗೆ ವಿನಾಯಕನ್ ಅವರನ್ನು ಏರ್ಪೋರ್ಟ್ ಪೊಲೀಸರು ಬಂಧಿಸಿದ್ದಾರೆ.
ಏರ್ಪೋರ್ಟ್ ಭದ್ರತೆ ಸಿಬ್ಬಂದಿ (ಸಿಐಎಸ್ಎಫ್) ನೀಡಿರುವ ದೂರಿನ ಆಧಾರದ ಮೇಲೆ ಎಫ್ಐಆರ್ ಸಹ ದಾಖಲಾಗಿದೆ.
ಗೋವಾಕ್ಕೆ ಹೋಗುತ್ತಿದ್ದ ವಿನಾಯಕನ್, ಕನೆಕ್ಟಿಂಗ್ ಫ್ಲೈಟ್ ಹತ್ತಲೆಂದು ಹೈದರಾಬಾದ್ನಲ್ಲಿ ಇಳಿದಾಗ ವಿಮಾನ ನಿಲ್ದಾಣದ ಸಿಐಎಸ್ಎಫ್ ಸಿಬ್ಬಂದಿ ಒಬ್ಬರೊಟ್ಟಿಗೆ ಜಗಳ ಮಾಡಿಕೊಂಡಿದ್ದು, ಹಲ್ಲೆ ಸಹ ಮಾಡಿದ್ದಾರೆ ಎಂದು ಏರ್ಪೋರ್ಟ್ ಭದ್ರತೆ ಸಿಬ್ಬಂದಿ ಆರೋಪ ಮಾಡಿದ್ದಾರೆ.
ಮಲಯಾಳಂ ಪತ್ರಿಕೆ ಮನೋರಮಾ ಜೊತೆಗೆ ಮಾತನಾಡಿರುವ ವಿನಾಯಕನ್, ಸಿಐಎಸ್ಎಫ್ ಸಿಬ್ಬಂದಿ ಕೆಲವರು ಅವರನ್ನು ಒಂದು ಕೋಣೆಗೆ ಕರೆದುಕೊಂಡು ಹೋಗಿ ಹಿಗ್ಗಾ-ಮುಗ್ಗ ಥಳಿಸಿದ್ದಾರಂತೆ. ಸಣ್ಣ ವಿಷಯಕ್ಕೆ ಭದ್ರತಾ ಸಿಬ್ಬಂದಿ ಜೊತೆಗೆ ವಿನಾಯಕನ್ ಜಗಳ ಮಾಡಿದ್ದಕ್ಕೆ ತಮಗೆ ಹೀಗೆ ಥಳಿಸಿದ್ದಾರೆಂದು ಅವರೇ ಹೇಳಿಕೊಂಡಿದ್ದಾರೆ.
‘ನಾನು ಯಾವುದೇ ತಪ್ಪು ಮಾಡಿಲ್ಲ ಬೇಕಿದ್ದರೆ ಸಾಕ್ಷ್ಯವಾಗಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಬಹುದು’ ಎಂದು ವಿನಾಯಕನ್ ಹೇಳಿದ್ದಾರೆ.
