
ಗಾಂಧಿನಗರ: ಮುಂದಿನ ಸಹಸ್ರ ವರ್ಷಗಳಿಗೆ ಭಾರತದಲ್ಲಿ ಈಗ ತಳಹದಿ ನಿರ್ಮಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನಾಲ್ಕನೇ ಜಾಗತಿಕ ಮರುಬಳಕೆ ಇಂಧನ ಹೂಡಿಕೆದಾರರ ಸಭೆಯನ್ನು (ರೀ ಇನ್ವೆಸ್ಟ್) ಉದ್ಘಾಟಿಸಿದ ಬಳಿಕ ಭಾಷಣ ಮಾಡಿದ್ದಾರೆ.
‘ಭಾರತವನ್ನು ವಿಶ್ವದ ಅತಿದೊಡ್ಡ ಆರ್ಥಿಕತೆಯ ದೇಶವನ್ನಾಗಿ ಮಾಡಲು 140 ಕೋಟಿ ಜನರು ಪಣತೊಟ್ಟಿದ್ದಾರೆ. ನಮ್ಮ ಮೂರನೇ ಅವಧಿಯ ಮೊದಲ 100 ದಿನಗಳಲ್ಲಿ ನಾವು ಈ ದೇಶದ ಕ್ಷಿಪ್ರ ಬೆಳವಣಿಗೆಗೆ ಪ್ರತಿಯೊಂದು ವಲಯ ಮತ್ತು ಅಂಶಗಳಲ್ಲೂ ಪ್ರಯತ್ನ ಮಾಡಿದ್ದೇವೆ’ ಎಂದು ನರೇಂದ್ರ ಮೋದಿ ತಿಳಿಸಿದ್ದಾರೆ.
ಇಪ್ಪತ್ತೊಂದನೇ ಶತಮಾನದಲ್ಲಿ ಭಾರತವೇ ಪ್ರಧಾನ. ಭಾರತ ಅಗ್ರಸ್ಥಾನಕ್ಕೆ ಏರುವುದಷ್ಟೇ ಅಲ್ಲ, ಆ ಸ್ಥಾನ ಉಳಿಸಿಕೊಳ್ಳುವುದು ಹೇಗೆ ಎನ್ನುವ ಅಂಶಗಳತ್ತ ಗಮನಿಸಲಾಗುತ್ತಿದೆ ಎಂದಿದ್ದಾರೆ.
ಮರುಬಳಕೆ ಇಂಧನದ ಬಗ್ಗೆ ಮಾತನಾಡಿದ ಪ್ರಧಾನಿ, ಅಯೋಧ್ಯೆ ಸೇರಿದಂತೆ 17 ಪ್ರದೇಶಗಳನ್ನು ಮಾದರಿ ಸೌರ ನಗರಗಳನ್ನಾಗಿ ಮಾಡಲು ತಮ್ಮ ಸರ್ಕಾರ ಪ್ರಯತ್ನಿಸುತ್ತಿರುವುದನ್ನು ಹೇಳಿದ್ದಾರೆ.
ಮನೆ ಮಾಳಿಗೆ ಮೇಲೆ ಸೌರ ಫಲಕ ಮೂಲಕ ಸೌರ ವಿದ್ಯುತ್ ನೀಡುವ ಪಿಎಂ ಸೂರ್ಯಘರ್ ಯೋಜನೆ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಪ್ರಧಾನಿ, 1.30 ಕೋಟಿ ಕುಟುಂಬಗಳು ಪಿಎಂ ಸೂರ್ಯಘರ್ ಯೋಜನೆಗೆ ನೊಂದಾಯಿಸಿಕೊಂಡಿವೆ. ಇವುಗಳ ಪೈಕಿ 3.75 ಲಕ್ಷ ಕುಟುಂಬಗಳಿಗೆ ಸೋಲಾರ್ ರೂಫ್ಟಾಪ್ ಸ್ಥಾಪನೆ ಮಾಡಲಾಗಿದೆ.
ಈ ಯೋಜನೆಯು ಕುಟುಂಬಕ್ಕೆ ವಿದ್ಯುತ್ ತಂದುಕೊಡುವುದಲ್ಲದೇ ಹೆಚ್ಚುವರಿ ವಿದ್ಯುತ್ ಅನ್ನು ಮಾರುವ ಮೂಲಕ ಹೆಚ್ಚುವರಿ ಆದಾಯವನ್ನೂ ಕುಟುಂಬ ಪಡೆಯಬಹುದು ಎಂದಿದ್ದಾರೆ ಮೋದಿ.
