
ಉಡುಪಿ: ಜನಹಿತವನ್ನು ಸಂಪೂರ್ಣವಾಗಿ ಮರೆತಿರುವ ರಾಜ್ಯ ಸರಕಾರ, ಕರಾವಳಿಯ ಮೂರು ಜಿಲ್ಲೆಗಳನ್ನು ಕಡೆಗಣಿಸುತ್ತಿದೆ. ಬಿಜೆಪಿ ಶಾಸಕರೇ ಹೆಚ್ಚಿದ್ದಾರೆ ಎಂಬ ಕಾರಣಕ್ಕೆ ಈ ಜಿಲ್ಲೆಗಳನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ ಎಂದು ಕಾರ್ಕಳ ಶಾಸಕ ಸುನೀಲ್ ಕುಮಾರ್ ಹೇಳಿದ್ದಾರೆ.
ಉಡುಪಿಯ ಖಾಸಗಿ ಹೊಟೇಲ್ನಲ್ಲಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರ ನೇತೃತ್ವದಲ್ಲಿ ಐವರು ಶಾಸಕರು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಕರಾವಳಿಯ ಅಭಿವೃದ್ಧಿ ಕಾರ್ಯಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ಬಿಡುಗಾಸು ಅನುದಾನ ಬಿಡುಗಡೆ ಮಾಡುತ್ತಿಲ್ಲ. ಮುಂದಿನ 10 ದಿನದೊಳಗೆ ಸರಕಾರ ಅನುದಾನವನ್ನು ಬಿಡುಗಡೆ ಮಾಡದಿದ್ದಲ್ಲಿ ಮೂರು ಜಿಲ್ಲೆಯ ಶಾಸಕರು ಸಿಎಂ ಮನೆ ಮುಂದೆ ಧರಣಿ ಕೂರುತ್ತೇವೆ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಬಜೆಟ್ ನಲ್ಲಿ ಕರಾವಳಿ ಜಿಲ್ಲೆಗಳಿಗೆ ಯಾವ ಮಹತ್ತರ ಯೋಜನೆಗಳನ್ನು ನೀಡಿಲ್ಲ. ಸರಕಾರ ದಿವಾಳಿಯಾಗಿದೆಯೋ ಅಥವಾ ಕರಾವಳಿ ಜಿಲ್ಲೆಯ ನಿರ್ಲಕ್ಷವೋ ಎಂಬ ಬಗ್ಗೆ ಸರಕಾರವೇ ಸ್ಪಷ್ಟನೇ ನೀಡಬೇಕು.
ಉಡುಪಿಯಲ್ಲಿ ಸಭೆ ನಡೆಸಿ ಪ್ರಚಾರ ಗಿಟ್ಟಿಸಿಕೊಂಡ ಮುಖ್ಯಮಂತ್ರಿ ಅವರು ಜಿಲ್ಲೆಯ ಮಳೆ ಹಾನಿ, ಬೆಳೆ ಹಾನಿ, ರಸ್ತೆ ದುರಸ್ತಿ, ಅಂಗನವಾಡಿ, ಶಾಲೆಗಳ ರಿಪೇರಿಗೆ ಹಣ ಬಿಡುಗಡೆ ಮಾಡುತ್ತಿಲ್ಲ, ಈ ವರ್ಷದ ಮಳೆಗೆ ಉಡುಪಿ ಜಿಲ್ಲೆಯಲ್ಲಿ 240 ಕೋ. ರೂ. ಹಾನಿಯಾಗಿದೆ ಎಂದು ಜಿಲ್ಲಾಡಳಿತ ರಾಜ್ಯ ಸರಕಾರಕ್ಕೆ ವರದಿ ನೀಡಿದೆ. ಆದರೂ ಹಣ ಬಿಡುಗಡೆಯಾಗಿಲ್ಲ,
ಕಳೆದ ವರ್ಷ ಜಿಲ್ಲೆಗೆ ಆಗಮಿಸಿ ಸಭೆ ನಡೆಸಿದ ಸಿಎಂ ಅವರು ಉಡುಪಿ ಜಿಲ್ಲೆಯಲ್ಲಿ ಕಾಲುಸಂಕ ನಿರ್ಮಾಣಕ್ಕೆ 50 ಕೋ. ರೂ ಅನುದಾನ ಒದಗಿಸುವ ಭರವಸೆ ನೀಡಿದ್ದರು. ಆದರೆ, ಇದುವರೆಗೆ ಸಿಎಂ ಭಾಗಿಯಾಗಿದ್ದ ಸಭೆಯಲ್ಲಿ ನಿರ್ಣಯಗೊಂಡ ಯಾವಲ್ಲಾ ಯೋಜನೆಗಳು ಅನುಷ್ಠಾನವಾಗಿದೆ ಎಂಬುದನ್ನು ಉತ್ತರಿಸಲಿ ಎಂದರು.
ಗ್ಯಾರೆಂಟಿ ಯೋಜನೆಗಳಿಗೆ ಹಣ ಹೊಂದಿಸಲು ಹಾಲು ಡಿಸೇಲ್, ಪಟ್ರೋಲ್ ಬೆಲೆ ಏರಿಕ, ಅಬಕಾರಿ ಸುಂಕ ಹೆಚ್ಚಳ. ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ತೆರಿಗೆ ಹೆಚ್ಚಳ ಮಾಡಿ ಜನರನ್ನು ಶೋಷಣೆಗೆ ಒಳಪಡಿಸುತ್ತಿದೆ ಎಂದು ಕಾಂಗ್ರೆಸ್ ಸರಕಾರವನ್ನು ಟೀಕಿಸಿದರು.
