
ಬೆಂಗಳೂರು: ದಾವಣಗೆರೆಯಲ್ಲಿ ಹಾಗೂ ಮಂಡ್ಯದ ನಾಗಮಂಗಲ ಗಲಭೆಯ ಬಗ್ಗೆ ಟ್ವೀಟ್ ಮಾಡಿದ ಬಿಜೆಪಿ ನಾಯಕರಾದ ಆರ್ ಅಶೋಕ್ ಮತ್ತು ಶೋಭಾ ಕರಂದ್ಲಾಜೆ ವಿರುದ್ಧ ಎಫ್ಐಆರ್ ದಾಖಲಿಸಿರುವ ವಿಚಾರವಾಗಿ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಎಕ್ಸ್ ನಲ್ಲಿ ಬಿಜೆಪಿ ವಾಗ್ದಾಳಿ ನಡೆಸಿದೆ.
ಕಾನೂನು ಉಲ್ಲಂಘಿಸುವವರಿಗೆ ರಕ್ಷಣೆ ನೀಡಲು ಸದಾ ‘ಸಿದ್ದ’ ಸರ್ಕಾರ ಎಂದು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ವ್ಯಂಗ್ಯಚಿತ್ರವೊಂದನ್ನು ಪ್ರಕಟಿಸಿ ಟೀಕಿಸಿದೆ.
‘‘ನಾಗಮಂಗಲದಲ್ಲಿ ಬಿಜೆಪಿ ನಾಯಕರ ವಿರುದ್ಧ ಎಫ್ಐಆರ್. ನಾವು ಬೆಂಕಿ ಹಚ್ಚಿದವರನ್ನು ಬಂಧಿಸಲ್ಲ, ಅದನ್ನು ವಿರೋಧಿಸುವವರನ್ನು ಮಾತ್ರ ಬಂಧಿಸೋದು’’ ಎಂದು ಸಿಎಂ ಸಿದ್ದರಾಮಯ್ಯ ಹೇಳುವ ಬರಹದೊಂದಿಗೆ ವ್ಯಂಗ್ಯಚಿತ್ರ ರಚಿಸಲಾಗಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇಂತಹ ಗಲಭೆಗಳು ಹಲವಾರು ಬಾರಿ ನಡೆಯುತ್ತಿದ್ದು, ರಾಜ್ಯದಲ್ಲಿ ಮತಾಂಧ ಶಕ್ತಿಗಳಿಗೆ ಗಲಭೆ ನಡೆಸಲು ಸರ್ಕಾರವೇ ಕುಮ್ಮಕ್ಕು ನೀಡಿದಂತಿದೆ ಎಂದು ಬಿಜೆಪಿ ಟೀಕಿಸಿದೆ.
