
ಉಡುಪಿ: ಹಿಂದೂ ಧರ್ಮದ ಮೇಲೆ ಆಕ್ರಮಣ, ದಬ್ಬಾಳಿಕೆ ನಡೆಯುತ್ತಿದೆ. ಈ ಆಕ್ರಮಣ ತಿರುಪತಿ ತಿಮ್ಮಪ್ಪನನ್ನೂ ಬಿಡಲಿಲ್ಲ. ಅಲ್ಲಿನ ಪ್ರಸಾದದಲ್ಲಿಯೂ ಕೊಬ್ಬು, ಎಣ್ಣೆೆಯನ್ನು ಹಾಕಿ ಪ್ರಸಾದವನ್ನು ಅಪವಿತ್ರಗೊಳಿಸಲಾಗಿದೆ ಎಂದು ಶ್ರೀ ಭಂಡಾರಕೇರಿ ಮಠದ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರು ಹೇಳಿದರು.
ವಿಶ್ವ ಹಿಂದೂ ಪರಿಷದ್ ಉಡುಪಿ ವತಿಯಿಂದ ಬನ್ನಂಜೆಯ ನಾರಾಯಣಗುರು ಆಡಿಟೋರಿಯಂನಲ್ಲಿ ನಡೆದ ಷಷ್ಠಿಪೂರ್ತಿ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಹಿಂದೂಗಳು ಸಿಂಧುವಾಗಬೇಕು. ಬಿಂದುವಾಗಬಾರದು. ಧರ್ಮ ಪರಿಪಾಲನೆ ವಿಚಾರದಲ್ಲಿ ಎಲ್ಲರೂ ಒಂದಾಗಬೇಕು. ಅಪಪ್ರಚಾರ ಹಾಗೂ ರಾಜಕೀಯ ಹಸ್ತಕ್ಷೇಪದಿಂದಾಗಿ ಬಹಳಷ್ಟು ಅನ್ಯಾಯಗಳು ಉಂಟಾಗುತ್ತಿವೆ. ತಿರುಪತಿ ತಿಮ್ಮಪ್ಪನ ಪ್ರಸಾದದಲ್ಲಿ ಇಂತಹ ಅನ್ಯಾಯ ನಡೆದಿರುವುದು ಸರಿಯಲ್ಲ ಎಂದರು.
ಮಠ-ಮಂದಿರದಲ್ಲಿ ಸರಕಾರದ ಹಸ್ತಕ್ಷೇಪ ಸಲ್ಲದು. ಇದಕ್ಕಾಗಿ ದೇಗುಲಗಳಲ್ಲಿ ಮಾರ್ಗದರ್ಶನ ಮಂಡಳಿ ರಚನೆಯಾಗಬೇಕು. ರಾಜಕೀಯ ವ್ಯಕ್ತಿಗಳು ಹಿಂದೂ ಮಂಠ- ಮಂದಿರಗಳಲ್ಲಿ ಹಸ್ತಕ್ಷೇಪ ಮಾಡಬಾರದು. ಆಚರಣೆಗಳಿಂದ ಹಿಂಸೆಯಾಗಬಾರದು. ಹಿಂದುತ್ವ ಉಳಿಸುವ ಕೆಲಸ ಮಾಡುವ ಜತೆಗೆ ವಿಶ್ವಹಿಂದೂ ಸಿಂಧುವಾಗಬೇಕು ಎಂದರು.
ಹಿಂದೂ ಧರ್ಮವನ್ನು ನಾನಾ ರೀತಿಯಲ್ಲಿ ನಾಶ ಮಾಡುವ ಪ್ರವೃತ್ತಿ ಅನ್ಯಧರ್ಮೀಯರಿಂದ ನಡೆಯುತ್ತಿದೆ. ಹಿಂದೂಗಳೇ ಬಹುಸಂಖ್ಯೆೆಯಲ್ಲಿರುವ ಭಾರತದಲ್ಲಿ ಗಣೇಶೋತ್ಸವ ಮೆರವಣಿಗೆಗೂ ಹೆದರಿ ಪೊಲೀಸ್ ಭದ್ರತೆಯಲ್ಲಿ ಹೋಗುವ ಶೋಚನೀಯ ಸ್ಥಿತಿ ಎದುರಾಗಿದೆ. ಹಿಂದೂ ಧರ್ಮದ ಉಳಿವಿಗೆ ಎಲ್ಲರೂ ಒಗ್ಗಟ್ಟಾಗಬೇಕು. ಜಾತಿ-ಜಾತಿಗಳೆಂಬ ಚಿಂತನೆ ಬಿಟ್ಟು ಹಿಂದೂಗಳೆಂಬ ಭಾವನೆ ಇರಬೇಕು ಎಂದರು.
ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಮಾತನಾಡಿ, ನಮ್ಮ ದೇಶ, ಧರ್ಮದ ಮೇಲೆ ಪ್ರೇಮ ಇರಬೇಕು. ಈ ಸಂಘಟನೆಗೆ 60 ವರ್ಷ ತುಂಬಿರುವುದು ಹೆಮ್ಮೆಯ ವಿಚಾರವಾಗಿದೆ. 60ಕ್ಕೆೆ ನಿವೃತ್ತಿ ಎಂಬಂತಾಗದೆ ಉದಾಸೀನತೆ ಬಿಟ್ಟು ದೇಶದ ರಕ್ಷಣೆಗೆ ಮುಂದಾಗಬೇಕು. ದೇಹಕ್ಕೂ ಮುನ್ನ ದೇಶ ಮುಖ್ಯವಾದುದು. ಸೂರ್ಯ-ಚಂದ್ರರು ಇದ್ದಷ್ಟು ಕಾಲ ಈ ಸಂಘಟನೆ ಉಳಿಯಬೇಕು ಎಂದರು.
ಕರ್ನಾಟಕ ವಿಹಿಂಪ ಮಂದಿರ ಅರ್ಚಕ ಪುರೋಹಿತ್ ಪ್ರಮುಖರಾದ ಬಸವರಾಜ್ ಜೀ, ಉದ್ಯಮಿ ಸಾಧು ಸಾಲ್ಯಾನ್, ಕೊಳಲು ವಾದಕ ಪಾಂಡು ಪಾಣಾರ, ವಿಭಾಗ ಕಾರ್ಯದರ್ಶಿ ದೇವಿ ಪ್ರಸಾದ್ ಶೆಟ್ಟಿ, ನಗರ ಅಧ್ಯಕ್ಷ ರಾಕೇಶ್ ಮಲ್ಪೆ, ನಗರ ಕಾರ್ಯದರ್ಶಿ ಲೋಕೇಶ್ ಶೆಟ್ಟಿಗಾರ್ ಉಪಸ್ಥಿತರಿದ್ದರು.
