
ಆನೇಕಲ್: ಟಾಟಾ ಕಂಪೆನಿಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ ಘಟನೆ ಗಡಿಭಾಗ ತಮಿಳುನಾಡಿನ ಹೊಸೂರು ಸಮೀಪದ ಕೂತನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಟಾಟಾ ಕಂಪನಿಯ ಕೆಮಿಕಲ್ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಧಗಧಗನೇ ಹೊತ್ತಿ ಉರಿದಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು, ಮಿಷನರಿಗಳು ಬೆಂಕಿಗಾಹುತಿ ಆಗಿವೆ.
ಒಂದು ಶಿಫ್ಟ್ನಲ್ಲಿ ನಾಲ್ಕೂವರೆ ಸಾವಿರ ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರ್ಮಿಕರು ಹೊರಗೆ ಓಡಿಬಂದಿದ್ದಾರೆ. ಇದರಿಂದಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎನ್ನಲಾಗಿದೆ.
ಕಂಪೆನಿಯಲ್ಲಿ ಮೊಬೈಲ್ ಬಿಡಿ ಭಾಗಗಳ ಉತ್ಪಾದನೆ ಮಾಡಲಾಗುತ್ತಿದ್ದ ಕೆಮಿಕಲ್ ಘಟಕದಲ್ಲಿ ಬೆಳಗ್ಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡು, ಭಾರಿ ಪ್ರಮಾಣದಲ್ಲಿ ಹೊಗೆ ತುಂಬಿಕೊಂಡಿದೆ.
ರಾಯಕೋಟೆ ಮತ್ತು ಡೆಂಕಣಿಕೋಟೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿಯನ್ನು ನಂದಿಸಲು ಹರಸಾಹಸ ಪಡಬೇಕಾಯಿತು.
ಸದ್ಯ ಮೂವರು ಕಾರ್ಮಿಕರು ಅಸ್ವಸ್ಥಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೊಗೆಯಿಂದಾಗಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಸದ್ಯ ಎಲ್ಲರ ಆರೋಗ್ಯ ಚೇತರಿಕೆ ಕಂಡುಬಂದಿದೆ.
