
ಬೆಂಗಳೂರು: ಚಾಮುಂಡೇಶ್ವರಿ ದೇವಿಯ ಆಶೀರ್ವಾದದಿಂದ ಸಿಎಂ ಸಿದ್ದರಾಮಯ್ಯ ಅವರು ಎಲ್ಲಾ ಸಮಸ್ಯೆಗಳಿಂದ ಬೇಗ ಹೊರಗೆ ಬರುತ್ತಾರೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸಿಎಂ ಅವರಿಗೆ ತಾಯಿಯ ಆಶೀರ್ವಾದ ಇದೆ. ಅವರೇ ಮುಂದಿನ ಐದು ವರ್ಷಗಳ ಕಾಲ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್, ದೇಶದಲ್ಲಿ ಎನ್ಡಿಎಗೆ ಅವಕಾಶ ಕೊಟ್ಟಿರೋದು ಅಭಿವೃದ್ಧಿ ಮಾಡೋಕೆ. ಅದನ್ನು ಬಿಟ್ಟು ಆರೋಪ, ಪ್ರತ್ಯಾರೋಪ ಮಾಡುತ್ತಾ ಕನ್ನಡಿಗರಿಗೆ ಅವಮಾನ ಮಾಡುತ್ತಿದ್ದಾರೆ.
ರಾಜ್ಯದ ಇತ್ತೀಚಿನ ಬೆಳವಣಿಗೆಗಳು ರಾಜ್ಯದ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ದಸರಾ ವೇಳೆ ಚಾಮುಂಡೇಶ್ವರಿ ದೇವಿಯ ಪೂಜಿಸುವ ಸಂದರ್ಭದಲ್ಲಿ ನೊಂದು ಹೇಳುತ್ತಿದ್ದೇನೆ. ಈ ರೀತಿ ಬೀದಿಯಲ್ಲಿ ಕಿತ್ತಾಟ ಮಾಡೋದು ಸರಿಯೇ? ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.
ಈ ಬೆಳವಣಿಗೆ ರಾಜ್ಯದ ಜನರಿಗೆ ಎಳ್ಳಷ್ಟು ಇಷ್ಟವಿಲ್ಲ. ಇದೇ ರೀತಿ ಮುಂದುವರೆದರೆ ಜನ ಕಲ್ಲಲ್ಲಿ ಹೊಡೆಯುತ್ತಾರೆ. ನಾನು ಮೂರು ಪಕ್ಷಗಳಿಗೆ ಎಚ್ಚರಿಕೆಯಾಗಿ ಹೇಳುತ್ತಿದ್ದೇನೆ. ದಿನೇ ದಿನೇ ಇದೇ ವಿಚಾರವನ್ನ ದೊಡ್ಡದು ಮಾಡಬಾರದು. ಚುನಾವಣೆಗೆ ಇನ್ನೂ 4 ವರ್ಷ ಇದೆ ಎಂದಿದ್ದಾರೆ.
