
ಮಂಗಳೂರು: ಬ್ಲೂ ಫ್ಲ್ಯಾಗ್ ಬೀಚ್ ಆಗಿ ಆಯ್ಕೆಯಾದ ತಣ್ಣೀರು ಬಾವಿಯನ್ನು ಬೀಚನ್ನು ಅಭಿವೃದ್ಧಿಪಡಿಸುವ ಕೆಲಸಗಳು ಈಗಾಗಲೇ ಸ್ಮಾರ್ಟ್ ಸಿಟಿ ಯೋಜನೆ ಸಹಿತ ಶೇ.90ರಷ್ಟು ಪೂರ್ಣಗೊಂಡಿದೆ. ಪ್ರವಾಸಿಗರನ್ನು ಕೇಂದ್ರವಾಗಿರಿಸಿಕೊಂಡು ಸ್ಥಳೀಯ ಆರ್ಥಿಕತೆಯ ಬೆಳವಣಿಗೆಗೆ ಪೂರಕವಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೆ ಮುಗಿಲನ್ ಸೂಚಿಸಿದ್ದಾರೆ.
ತಮ್ಮ ಕಚೇರಿಯಲ್ಲಿ ಬೀಚ್ನ ಅಭಿವೃದ್ಧಿ ಮತ್ತು ನಿರ್ವಹಣೆಯ ಟೆಂಡರ್ಗೆ ಸಂಬಂಧಿಸಿ ನಡೆದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿ ಅವರು, ಬ್ಲೂ ಫ್ಲ್ಯಾಗ್ ಬೀಚ್ ಮಾನ್ಯತೆ ಒಂದು ಋತು ಅವಧಿಗೆ ಸೀಮಿತವಾಗಿರುತ್ತದೆ. ಪರಿಸರ ಸ್ನೇಹಿ ಬೀಚ್ ಆಗಿ ಗುರುತಿಸಲ್ಪಟ್ಟ ತಣ್ಣೀರುಬಾವಿ ಬೀಚ್ನಲ್ಲಿ ತ್ಯಾಜ್ಯ ನಿರ್ವಹಣೆ ವ್ಯವಸ್ಥೆ, ಸೋಲಾರ್ ಬಳಕೆ ಮೊದಲಾದವನ್ನು ಅಳವಡಿಸಲಾಗಿದೆ ಎಂದರು.
ಅದರ ನಿರ್ವಹಣೆ ಆಧರಿಸಿ ಮಾನ್ಯತೆ ಮುಂದುವರಿಸಲಾಗುತ್ತದೆ. ಹಾಗಾಗಿ ಸರಿಯಾಗಿ ನಿರ್ವಹಿಸದ ಸಂಸ್ಥೆಗಳನ್ನು ಬದಲಾಯಿಸಲಾಗುವುದು ಎಂದು ಹೇಳಿದರು.
ತಣ್ಣೀರುಬಾವಿಯ ಮೊದಲನೇ ಬೀಚ್ನಲ್ಲಿ ರಾತ್ರಿ 9.30ರ ವರೆಗೆ ಸಾರ್ವಜ ನಿಕರಿಗೆ ತಂಗಲು ಅವಕಾಶವಿದೆ. ಆದರೆ ಬ್ಲೂ ಫ್ಲ್ಯಾಗ್ ಆಗಿ ಗುರುತಿಸಿದ ಬೀಚ್ನಲ್ಲಿ ಸಂಜೆ 6.30ರ ವರೆಗೆ ಮಾತ್ರ ಅವಕಾಶವಿದ್ದು, ಈ ಅವಧಿಯನ್ನು ಹೆಚ್ಚಿಸಬೇಕು. ಪಾರ್ಕಿಂಗ್ ಸ್ಥಳ ವಿಸ್ತರಿಸಬೇಕು. ರಸ್ತೆ ಸಂಪರ್ಕ ವ್ಯವಸ್ಥೆ ಉತ್ತಮ ಪಡಿಸಬೇಕು. ಬೆಳಕಿನ ವ್ಯವಸ್ಥೆ ಸುಧಾರಣೆ ಸೇರಿದಂತೆ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಬಿಡ್ಡುದಾರರು ಕೋರಿದರು. ಈ ಬೇಡಿಕೆಗಳ ಬಗ್ಗೆ ಗಮನ ಹರಿಸುವುದಾಗಿ ಡಿಸಿ ತಿಳಿಸಿದರು.
