
ಕುಂದಾಪುರ: ಮಣ್ಣು ತುಂಬಿದ ಲಾರಿ ಮಗುಚಿ ಬಿದ್ದು ಮಣ್ಣಿನ ಕೆಳಗೆ ಸ್ಕೂಟಿ ಸಮೇತ ಬಿದ್ದ ಮಹಿಳೆಯನ್ನು ರಿಕ್ಷಾ ಚಾಲಕರೊಬ್ಬರು ರಕ್ಷಿಸಿದ ಘಟನೆ ನಡೆದಿದೆ.
ಸ್ಥಳೀಯ ನಿವಾಸಿ ಆರತಿ ಶೆಟ್ಟಿ ಮಣ್ಣಿನಡಿಯಲ್ಲಿ ಸಿಲುಕಿಕೊಂಡರು.
ಬೈಂದೂರು ತಾಲೂಕಿನ ನಾಗೂರು ಉಪ್ರಳ್ಳಿ ಒಳ ರಸ್ತೆಯ ತಿರುವಿನಲ್ಲಿ ಮಣ್ಣು ತುಂಬಿದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಒಂದು ಬದಿಗೆ ವಾಲಿ ಮಗುಚಿ ಬಿದ್ದಿತ್ತು.
ಅದೇ ಸಂದರ್ಭದಲ್ಲಿ ಲಾರಿಯ ಪಕ್ಕದಲ್ಲೇ ಮಹಿಳೆ ಚಲಾಯಿಸುತ್ತಿದ್ದ ಸ್ಕೂಟಿಯೊಂದು ಸಾಗುತ್ತಿತ್ತು. ಈ ಸ್ಕೂಟಿಯ ಮೇಲೆ ಲಾರಿ ಮಗುಚಿ ಬಿದ್ದು, ಲಾರಿಯಲ್ಲಿದ್ದ ಮಣ್ಣಿನ ಅಡಿಯಲ್ಲಿ ಸ್ಕೂಟಿ ಸಮೇತ ಸವಾರೆ ಸಿಕ್ಕಿಬಿದ್ದಿದ್ದಾರೆ.
ಅದೇ ದಾರಿಯಾಗಿ ರಿಕ್ಷಾ ಚಲಾಯಿಸಿಕೊಂಡು ಹೋಗುತ್ತಿದ್ದ ಸಮಾಜಸೇವಕ ಕೋಡಿ ಅಶೋಕ್ ಪೂಜಾರಿ ಅವರ ಕಣ್ಣೆದುರೇ ಘಟನೆ ನಡೆದಿದ್ದು, ಮಣ್ಣಿನಲ್ಲಿ ಮುಖ ಸಂಪೂರ್ಣ ಮುಚ್ಚಿ ಹೋಗಿದ್ದ ಮಹಿಳೆಯನ್ನು ಕೈಗಳಿಂದಲೇ ಮಣ್ಣನ್ನು ಅಗೆದು ಯುವತಿಯ ತಲೆಯನ್ನು ಮಣ್ಣಿನಿಂದ ಮೊದಲು ಮೇಲಕ್ಕೆತ್ತಿದರು.
ಅನಂತರ ಸ್ಥಳೀಯರ ಸಹಕಾರದಿಂದ ಲಾರಿಯ ಮಣ್ಣಿನಡಿಯಿಂದ ಮಹಿಳೆಯನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಕಳುಹಿಸಲಾಯಿತು.
