
ಕಾವೂರು: ಕಾಸರಗೋಡು ಬೊವಿಕ್ಕಾನದಲ್ಲಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ತೀರ್ಥ ಶ್ರೀಪಾದರ ವಾಹನಕ್ಕೆ ಅಡ್ಡಿಪಡಿಸಿ ಹಾನಿ ಮಾಡಿರುವುದನ್ನು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ ಭರತ್ ಶೆಟ್ಟಿ ಖಂಡಿಸಿದ್ದಾರೆ.
ಹಿಂದೂ ಸಮಾಜಕ್ಕೆ ಮಾರ್ಗದರ್ಶನ ನೀಡುವ ಹಾಗೂ ನಮ್ಮ ಸಮಾಜದ ಪೂಜ್ಯ ಮಠಗಳಲ್ಲಿ ಒಂದಾಗಿರುವ ಎಡನೀರು ಮಠದ ಶ್ರೀಗಳ ಮೇಲಿನ ದಾಳಿ ಹಿಂದೂ ಸಮಾಜದ ಮೇಲೆ ನಡೆದಿರುವ ದಾಳಿಯಾಗಿದೆ.
ಕೇರಳದಲ್ಲಿ ಕಾನೂನು ಸುವ್ಯವಸ್ಥೆಗೆ ಪುಂಡರು, ಹಿಂದು ವಿರೋಧಿ ಶಕ್ತಿಗಳು ಸವಾಲು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಅಲ್ಲಿನ ಸರಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ.
ಸರಕಾರ ತಕ್ಷಣ ಸಮಾಜಘಾತ ಶಕ್ತಿಗಳನ್ನು ಹೆಡೆಮುರಿ ಕಟ್ಟಲು ಜಾಮೀನು ರಹಿತ ಸೆಕ್ಷನ್ ಅಡಿ ಕೇಸು ದಾಖಲಿಸಬೇಕು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಒತ್ತಾಯಿಸಿದ್ದಾರೆ.
