
ಮಣಿಪಾಲ: ಬೀದಿ ನಾಯಿಗಳ ಉಪಟಳ ಎಲ್ಲಕಡೆಯೂ ಇದ್ದೆ ಇದೆ ಆದರೆ ಈಗ ಬೀದಿ ನಾಯಿಗಳು ಜಿಲ್ಲಾಧಿಕಾರಿ ಕಚೇರಿ ಆವರಣದೊಳಗೂ ಸೇರಿಕೊಂಡು ಜನರಿಗೆ ತೊಂದರೆ ನೀಡುತ್ತಿದೆ.
ಕಚೇರಿಯ ಎದುರುಭಾಗದ ಗೇಟ್ ಹಾಗೂ ಹಿಂಬದಿಯಿಂದ ನಾಯಿಗಳು ಆಗಮಿಸುತ್ತಿದ್ದು, ಈಗಾಗಲೇ ಕೆಲವು ಮಂದಿ ಕಡಿತಕ್ಕೂ ಒಳಗಾಗಿದ್ದಾರೆ. ಇಲ್ಲಿನ ಭದ್ರತಾ ಸಿಬಂದಿ ನಾಯಿಯನ್ನು ಓಡಿಸುವ ಕೆಲಸ ಮಾಡುತ್ತಿದ್ದರೂ ಅದರ ಉಪಟಳ ಮಾತ್ರ ತಪ್ಪುತ್ತಿಲ್ಲ.
ದಿನನಿತ್ಯ ಜಿಲ್ಲಾಧಿಕಾರಿ ಕಚೇರಿಗೆ ಹಲವಾರು ಮಂದಿ ಭೇಟಿ ನೀಡುತ್ತಿದ್ದು, ಪ್ರತಿಭಟನೆಗಳು ನಡೆಯುವ ವೇಳೆ ಸಾಕಷ್ಟು ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಅಲ್ಲದೆ ಸಭೆ, ಸಮಾರಂಭಗಳು ಇರುವಾಗ ಆಗಮಿಸುವ ಜನರ ಸಂಖ್ಯೆಯೂ ಅಧಿಕವಿರುತ್ತದೆ. ಈ ವೇಳೆ ನಾಯಿಗಳು ಉಪಟಳ ನೀಡಿದರೆ ಸಾರ್ವಜನಿಕರು ತೊಂದರೆ ಎದುರಿಸಬೇಕಾಗುತ್ತದೆ ಎನ್ನುತ್ತಾರೆ ಸ್ಥಳೀಯರು.
ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಕಟ್ಟಡ ಒಳಗೂ ಶ್ವಾನಗಳು ಮಲಗಿರುತ್ತವೆ. ಈ ಬಗ್ಗೆ ನಗರಸಭೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
