
ಹೆಬ್ರಿ: ಮೋಸ್ಟ್ ವಾಂಟೆಡ್ ನಕ್ಸಲ್ ಆಗಿರುವ ವಿಕ್ರಂ ಗೌಡ ಅಂತ್ಯಕ್ರಿಯೆ ಬುಧವಾರ ಕೂಡ್ಲುವಿನ ಮನೆ ಪರಿಸರದಲ್ಲಿ ನಡೆಯಿತು.
ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸುವುದಿಲ್ಲ ಎಂದಿದ್ದ ಕುಟುಂಬಿಕರ ಮನವೊಲಿಸಿದ ಅಧಿಕಾರಿಗಳು ಅಂತ್ಯಕ್ರಿಯೆಯಲ್ಲಿ ಭಾಗವಹಿಸುವಂತೆ ಮಾಡಿದ್ದಾರೆ. ಕುಟುಂಬದವರು, ಊರಿನವರ ಸಹಿತ ಸುಮಾರು 150ಕ್ಕೂ ಹೆಚ್ಚು ಜನರ ಸಮ್ಮುಖದಲ್ಲಿ ವಿಕ್ರಂ ಗೌಡನ ಸಹೋದರ ಸುರೇಶ್ ನೇತೃತ್ವ, ತಂಗಿ ಸುಗುಣಾ ಉಪಸ್ಥಿತಿಯಲ್ಲಿ ಅಂತ್ಯಸಂಸ್ಕಾರ ನಡೆಯಿತು.
ಆರಂಭದಲ್ಲಿ ಶವಸಂಸ್ಕಾರ ನಡೆಸಲು ಹಿಂದೇಟು ಹಾಕಿದ್ದರು. ಅನಂತರದಲ್ಲಿ ಪೊಲೀಸರ ಮನವಿಗೆ ಸ್ಪಂದಿಸಿ ಶವಸಂಸ್ಕಾರ ಮನೆಯ ಕೃಷಿ ಭೂಮಿಯಲ್ಲಿ ನಡೆಸಲು ನಿರ್ಧರಿಸಿದ್ದರು.
ಎನ್ಕೌಂಟರ್ ನಡೆದ ಮಾಹಿತಿ ದೊರೆತ ಆರಂಭದಲ್ಲಿ ಸಹೋದರ ಹೊರತು ಪಡಿಸಿ ತಂಗಿ, ಕುಟುಂಬಿಕರು ಯಾರೂ ಘಟನೆ ನಡೆದ ಸ್ಥಳ ಹಾಗೂ ಶವವಿರಿಸಿದ್ದ ಆಸ್ಪತ್ರೆಗೆ ತೆರಳಿರಲಿಲ್ಲ.
ವಿಕ್ರಂ ಗೌಡನ ಮೃತದೇಹವನ್ನು ಮಂಗಳವಾರ ಸಂಜೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ತರಲಾಗಿತ್ತು. ತಡರಾತ್ರಿ 12 ಗಂಟೆ ಬಳಿಕ ಅಧಿಕಾರಿಗಳ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ಆರಂಭಗೊಂಡು ಬುಧವಾರ ಬೆಳಗ್ಗಿನ ಜಾವ 5 ಗಂಟೆ ತನಕವೂ ಮುಂದುವರಿದಿತ್ತು ಎಂದು ಮೂಲಗಳು ತಿಳಿಸಿವೆ.
