
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 17.74 ಕಿ.ಮೀ. ವ್ಯಾಪ್ತಿಯಲ್ಲಿ ಕಡಲ್ಕೊರೆತ ಸಂಭವಿಸುತ್ತಿರುವುದಾಗಿ ಕೇಂದ್ರ ಪರಿಸರ ಖಾತೆ ಸಚಿವ ಕೀರ್ತಿವರ್ಧನ್ ಸಿಂಗ್ ಅವರು ಹೇಳಿದ್ದಾರೆ.
ಸಂಸದ ಕ್ಯಾ| ಬ್ರಿಜೇಶ್ ಚೌಟ ಅವರು ಸಂಸತ್ನ ಚಳಿಗಾಲದ ಅಧಿವೇಶದಲ್ಲಿ ಕೇಳಿದ ಪ್ರಶ್ನೆಗೆ ಲಿಖಿತವಾಗಿ ಸಚಿವರು ಉತ್ತರಿಸಿದ್ದಾರೆ.
36.66 ಕಿ.ಮೀ. ಕರಾವಳಿ ಪ್ರದೇಶದಲ್ಲಿ ಭಾರತೀಯ ರಾಷ್ಟ್ರೀಯ ಸಮುದ್ರ ಮಾಹಿತಿ ಹಾಗೂ ಸೇವಾ ಕೇಂದ್ರ ಸಂಗ್ರಹಿಸಿರುವ ಉಪಗ್ರಹ ಆಧಾರಿತ ಮಾಹಿತಿ ಅನ್ವಯ ವಿವರಣೆ ನೀಡಿದ್ದಾರೆ.
ಉತ್ತರ ಕನ್ನಡ ಒಳಗೊಂಡಂತೆ ಕರ್ನಾಟಕದ 313 ಕಿ.ಮೀ. ಕರಾವಳಿ ತೀರ ಪ್ರದೇಶದ ಪೈಕಿ ಒಟ್ಟು 74.34 ಕಿ.ಮೀ. ಸಹಿತ ಒಟ್ಟು ತೀರ ಪ್ರದೇಶದ ಶೇ.23.7ರಷ್ಟು ಭಾಗವು ಕಡಲ್ಕೊರೆತದ ಹೊಡೆತಕ್ಕೆ ಸಿಲುಕಿರುವುದಾಗಿ ಸಚಿವರು ವಿವರಿಸಿದ್ದಾರೆ.
ಅಲ್ಲದೆ ಕರಾವಳಿ ಪ್ರದೇಶದಲ್ಲಿ ವ್ಯಾಪಕವಾಗುತ್ತಿರುವ ಸಮುದ್ರ ಕೊರೆತ ತಡೆಗಟ್ಟಲು ರಾಜ್ಯ ಸರಕಾರಕ್ಕೂ ಕೇಂದ್ರ ದಿಂದ ತಾಂತ್ರಿಕ ನೆರವು ಹಾಗೂ ಅಗತ್ಯ ಸಲಹೆ ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
