
ಕಾಪು: ಕಾಪು ಹೊಸ ಮಾರಿಗುಡಿ ದೇಗುಲದ ನೂತನ ವ್ಯವಸ್ಥಾಪನ ಸಮಿತಿಯ ಅಧಿಕಾರ ಸ್ವೀಕಾರ ಕಾರ್ಯಕ್ರಮ ಇಂದು ನಡೆಯಿತು.
ದತ್ತಿ ಇಲಾಖೆ ಆಯುಕ್ತ ಪ್ರಶಾಂತ್ ಕುಮಾರ್ ಶೆಟ್ಟಿ ಹಾಗೂ ಕಾರ್ಯನಿರ್ವಾಹಣಾಧಿಕಾರಿ ರವಿಕಿರಣ್ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಾಸುದೇವ ಶೆಟ್ಟಿ ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ ದೇಗುಲದ ವಿಚಾರವಾಗಿ ಹಗುರವಾಗಿ ಬರೆಯುವುದು ಖಂಡನೀಯವಾಗಿದೆ.
ಭಕ್ತರು ಸಾಮಾಜಿಕ ಜಾಲತಾಣದ ಸಂದೇಶಗಳಿಗೆ ತಲೆಗೆಡಿಸಿಕೊಳ್ಳದೆ ನಿರಂತರ ಅಮ್ಮನ ಸೇವೆ ಮಾಡಲು ಕಟಿಬದ್ದರಾಗೋಣ. ಸರ್ಕಾರದ ಸುತ್ತೋಲೆ ಪ್ರಕಾರ ರಾಜಕೀಯ ರಹಿತವಾಗಿ ಸಾಮಾಜಿಕ ಧಾರ್ಮಿಕ ಬದ್ಧತೆಯ ಆಡಳಿತ ಮಂಡಳಿ ರಚನೆಯಾಗಿದೆ, ಈ ಕಮಿಟಿಗೆ ಜವಾಬ್ದಾರಿ ಹೆಚ್ಚಿದ್ದು ಎಲ್ಲರೂ ಒಟ್ಟಾಗಿ ಅಮ್ಮನ ಸೇವೆ ಮಾಡಬೇಕು ಎಂದರು.
ಈ ಸಂದರ್ಭ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಮಾತನಾಡಿ, ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿರುವ ದೇಗುಲ ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಯಿಂದ ಸರ್ಕಾರದ ಸುತ್ತೋಲೆ ಪ್ರಕಾರ ಆಡಳಿತ ಕಮಿಟಿ ರಚನೆಯಾಗಿದ್ದು, ಮುಂದಿನ ದಿನಗಳಲ್ಲಿ ಜೀರ್ಣೋದ್ದಾರ ಕಮಿಟಿ ಹಾಗೂ ಆಡಳಿತ ಕಮಿಟಿಯ ಜಂಟಿ ನಿಯೋಗ ಮುಖ್ಯಮಂತ್ರಿ ಭೇಟಿ ಮಾಡಿ ಬ್ರಹ್ಮಕಲಶೋತ್ಸವ ಪೂರ್ವಭಾವಿ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಲಾಗುವುದು ಎಂದರು.
ಈ ಸಂಧರ್ಭದಲ್ಲಿ ನೂತನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಸದಸ್ಯರಾದ ಮಾಧವ ಪಾಲನ್, ವೇದಮೂರ್ತಿ ಶ್ರೀನಿವಾಸ ತಂತ್ರಿ, ಶೇಖರ್ ಸಾಲಿಯಾನ್, ಜಯಲಕ್ಷ್ಮಿ ಸುರೇಶ್ ಶೆಟ್ಟಿ, ಮನೋಹರ್ ರಾವ್, ರವೀಂದ್ರ, ಚರಿತ ದೇವಾಡಿಗ, ಜೀರ್ಣೋದ್ಧಾರ ಸಮಿತಿಯ ಪ್ರಮುಖರಾದ ಕಾಪು ದಿವಾಕರ ಶೆಟ್ಟಿ, ಯೋಗಿಶ್ ಶೆಟ್ಟಿ ಬಾಲಾಜಿ, ರಮೇಶ್ ಹೆಗ್ಡ ಕಲ್ಯಾ, ಅಧಿಕಾರಿಗಳಾದ ಪ್ರಶಾಂತ್ ಕುಮಾರ್ ಶೆಟ್ಟಿ, ರವಿಕುಮಾರ್, ಕಾಪು ಲಕ್ಷ್ಮೀ ಜನಾರ್ದನ ದೇಗುಲದ ಆಡಳಿತ ಮೊಕ್ತಸರ ಮನೋಹರ್ ಶೆಟ್ಟಿ, ಎಲ್ಲೂರು ವಿಶ್ವೇಶ್ವರ ದೇಗುಲದ ಆಡಳಿತ ಮೊಕ್ತೆಸರ ಅರುಣ್ ಶೆಟ್ಟಿ, ಪೆರ್ಡೂರು ಅನಂತಪದ್ಮನಾಭ ದೇಗುಲದ ಆಡಳಿತ ಮೊಕ್ತೆಸರ ಪ್ರಮೋದ್ ರೈ ಉಪಸ್ಥಿತರಿದ್ದರು.
