
ಕಾಪು: ಯುವ ಕ್ರಿಕೆಟ್ ಆಟಗಾರನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಪುವಿನಲ್ಲಿ ನಡೆದಿದೆ.
ಮೃತನನ್ನು ಉದ್ಯಾವರ ಕೇದಾರ್ ಬೊಳ್ಜೆ ನಿವಾಸಿ, ಆದಿತ್ಯ (24) ಎಂದು ಗುರುತಿಸಲಾಗಿದೆ.
ಆದಿತ್ಯ ಶನಿವಾರ ರಾತ್ರಿ ಪೆರಂಪಳ್ಳಿಯಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ತನ್ನ ತಂಡದೊಂದಿಗೆ ಭಾಗವಹಿಸಿದ್ದ. ರವಿವಾರ ಮುಂಜಾನೆ 3 ಗಂಟೆಗೆ ಮನೆಗೆ ಬಂದ ಬಳಿಕ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕಳೆದ ವರ್ಷ ಅಪಘಾತದಲ್ಲಿ ಮೃತಪಟ್ಟ ತನ್ನ ಸ್ನೇಹಿತ ಸುಕ್ಷಿತ್ನ ಹೆಸರಿನಲ್ಲಿ ಕ್ರಿಕೆಟ್ ತಂಡವನ್ನು ಕಟ್ಟಿಕೊಂಡಿದ್ದರು. ಆ ತಂಡದ ಮೂಲಕ ಕ್ರಿಕೆಟ್ ಆಟವಾಡುತ್ತಿದ್ದರು.
ಬೆಳಗ್ಗೆ ಅಜ್ಜಿ ಬಾಗಿಲು ಬಡಿದಾಗ, ಬಾಗಿಲು ತೆರೆಯದೇ ಇದ್ದು ಕಿಟಕಿಯಿಂದ ಇಣುಕಿ ನೋಡಿದಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಆತನ ತಂದೆ, ತಾಯಿ ತೀರಿ ಹೋಗಿದ್ದು, ಅಜ್ಜಿ ಮತ್ತು ಸಹೋದರನ ಆಶ್ರಯದಲ್ಲಿ ಬೆಳೆಯುತ್ತಿದ್ದ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
