
ಪುಂಜಾಲಕಟ್ಟೆ: ವಿವಾಹದ ವಿಚ್ಛೇದನ ಪ್ರಕ್ರಿಯೆ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿರುವಾಗಲೇ ಪತಿಗೆ ತಿಳಿಯದಂತೆ ಪತ್ನಿ ಎರಡನೇ ವಿವಾಹವಾಗಿದ್ದು, ಪತ್ನಿಗೆ ನೀಡಲಾಗುತ್ತಿದ್ದ ಜೀವನಾಂಶ ರದ್ದುಗೊಳಿಸಿ ಮಂಗಳೂರಿನ ಕೌಟುಂಬಿಕ ನ್ಯಾಯಾಲಯವು ಹೊರಡಿಸಿದ್ದ ಆದೇಶವನ್ನು ಬೆಂಗಳೂರು ಕೌಟುಂಬಿಕ ನ್ಯಾಯಾಲಯ ಎತ್ತಿ ಹಿಡಿದಿದೆ.
ಪಣಕಜೆ, ಮಂಡಾಡಿ ನಿವಾಸಿ ಉದಯ ನಾಯಕ್ ಮಂಗಳೂರಿನ ಅನಿತಾ ನಾಯಕ್ ಅವರನ್ನು 2018 ರಲ್ಲಿ ಮದುವೆಯಾಗಿದ್ದು, ಬಳಿಕ ದಾಂಪತ್ಯದಲ್ಲಿ ಸಮಸ್ಯೆ ತಲೆದೋರಿ ಡೈವೋರ್ಸ್ ಪಿಟಿಷನ್ ಸಲ್ಲಿಸಿದ್ದರು.
ವ್ಯಾಜ್ಯವು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವಾಗಲೇ ಅನಿತಾ ಗೌಪ್ಯವಾಗಿ 2ನೇ ವಿವಾಹವಾಗಿದ್ದಾಳೆ ಎಂದು ಆರೋಪಿಸಿ ಉದಯ ನಾಯಕ್ ನ್ಯಾಯಾಲಯದ ಮೊರೆ ಹೋಗಿದ್ದರು.
ಈ ಮಧ್ಯೆ ಉದಯ ಅವರಿಂದ ಜೀವನಾಂಶ ಕೋರಿ ಪತ್ನಿ ಅನಿತಾ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ವಿಚಾರಣೆ ನಡೆಸಿದ ಮಂಗಳೂರಿನ ಕೌಟುಂಬಿಕ ನ್ಯಾಯಾಲಯವು ಅನಿತಾಗೆ ಜೀವನ ನಿರ್ವಹಣೆಗಾಗಿ ನೀಡಲಾಗುತ್ತಿದ್ದ ಜೀವನಾಂಶವನ್ನು ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಅನಿತಾ ಬೆಂಗಳೂರಿನಲ್ಲಿರುವ ಕೌಟುಂಬಿಕ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
ಈ ದಾವೆಯ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾ|ಅಶೋಕ್ ಎಸ್. ಕಿಣಗಿ ಅವರು ಅನಿತಾ ಅವರ ರಿಟ್ ಅರ್ಜಿ ವಜಾಗೊಳಿಸಿ ತೀರ್ಪು ನೀಡಿದ್ದಾರೆ.
