
ಮಂಗಳೂರು: ಡಿ. 21 ರಿಂದ ಜ.19 ರವರೆಗೆ ಕರ್ನಾಟಕ, ತುಳು, ಬ್ಯಾರಿ, ಕೊಂಕಣಿ, ಅರೆ ಭಾಷೆ ಅಕಾಡೆಮಿಗಳ ಸಹಕಾರದೊಂದಿಗೆ ‘ಕರಾವಳಿ ಉತ್ಸವʼ ನಡೆಯಲಿದೆ.
ಡಿ. 21 ರಂದು ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಆ ದಿನ ಸಂಜೆ 4 ಗಂಟೆಗೆ ಕೊಡಿಯಾಲ್ ಬೈಲ್ ನ ಕೆನರಾ ಕಾಲೇಜಿನಿಂದ ಕರಾವಳಿ ಉತ್ಸವ ಮೈದಾನದವರೆಗೆ ಆಕರ್ಷಕ ಮೆರವಣಿಗೆ ನಡೆಯಲಿದೆ.
ಜಿಲ್ಲೆಯ ಸಂಸ್ಕೃತಿ ಮತ್ತು ವೈವಿಧ್ಯಮಯ ಸಾಂಪ್ರದಾಯಿಕ ವೇಷಭೂಷಣಗಳೊಂದಿಗೆ ಕಲಾವಿದರ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ.
21 ಮತ್ತು 22 ರಂದು ಪ್ರಸಿದ್ಧ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನಡೆಯಲಿದೆ.
ಆಹಾರ ಮೇಳ: ವೈವಿಧ್ಯಮಯ ಖಾದ್ಯಗಳ ತಯಾರಿಕೆ, ಪ್ರದರ್ಶನ ಮತ್ತು ಮಾರಾಟಗಳನ್ನು ಒಂದೇ ಸೂರಿನಡಿ ಏರ್ಪಡಿಸಲಾಗಿದ್ದು, ತುಳುನಾಡಿನ ತಿಂಡಿ ತಿನಿಸುಗಳನ್ನು ಪರಿಚಯ ಮಾಡಿಕೊಳ್ಳಲು ಮತ್ತು ಸವಿಯಲು ಸಾರ್ವಜನಿಕರಿಗೆ ಇದೊಂದು ಅಪರೂಪದ ಅವಕಾಶವಾಗಿದೆ.
ವಾಣಿಜ್ಯ ಮಳಿಗೆ: ಆಹಾರ ಉತ್ಪನ್ನಗಳು ಮಾತ್ರವಲ್ಲದೆ ಉಡುಗೆ ತೊಡುಗೆಗಳು ಮತ್ತು ವಿವಿಧ ವಾಣಿಜ್ಯ ಮಳಿಗೆಗಳಿಗೆ ಕರಾವಳಿ ಉತ್ಸವ ಮೈದಾನದಲ್ಲಿ ಸಾಕಷ್ಟು ಸ್ಥಳಾವಕಾಶ ಒದಗಿಸಲಾಗಿದೆ.
ಡಿಸೆಂಬರ್ 28 ಮತ್ತು 29ರಂದು ತಣ್ಣೀರು ಬಾವಿ ಬೀಚ್ ನಲ್ಲಿ ಬೀಚ್ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಶನಿವಾರ ಸಂಜೆ 6 ಗಂಟೆಗೆ ಬೀಚ್ ಉತ್ಸವ ಉದ್ಘಾಟನೆಗೊಳ್ಳಲಿದೆ. ಇವುಗಳ ಜೊತೆಗೆ, ಜ.4 ಮತ್ತು 5 ರಂದು ಕದ್ರಿ ಪಾರ್ಕ್ ನಲ್ಲಿ ಆಟೋಮೊಬೈಲ್ ಮತ್ತು ಶ್ವಾನ ಪ್ರದರ್ಶನ,ಜ. 11 ಮತ್ತು 12 ರಂದು ಕದ್ರಿ ಪಾರ್ಕ್ ನಲ್ಲಿ ಯುವ ಉತ್ಸವ, ಜ18 ಮತ್ತು 19 ರಂದು ತಣ್ಣೀರು ಬಾವಿ ಬೀಚ್ ನಲ್ಲಿ ಸುಪ್ರಸಿದ್ದ ಅಂತರಾಷ್ಟ್ರೀಯ ಗಾಳಿಪಟ ಉತ್ಸವ ನಡೆಯಲಿದೆ.
