
ಪ್ರಯಾಗರಾಜ್: ಜನವರಿ 13 ರಂದು ಪ್ರಯಾಗ್ರಾಜ್ನಲ್ಲಿ ಮಹಾಕುಂಭ ಪ್ರಾರಂಭವಾದಾಗಿನಿಂದ ಇದುವರೆಗೂ ಸಂಗಮದಲ್ಲಿ ಸ್ನಾನ ಮಾಡಿದ ಒಟ್ಟು ಭಕ್ತರ ಸಂಖ್ಯೆ ಶುಕ್ರವಾರ (ರಾತ್ರಿ 8 ರವರೆಗೆ) 40.68 ಕೋಟಿ!! ಶುಕ್ರವಾರ ಒಂದು ದಿನದಂದೇ 94.07 ಲಕ್ಷ ಮಂದಿ ಕುಂಭಸ್ನಾನ ನೆರವೇರಿಸಿದ್ದಾರೆ ಎಂದು ಸರಕಾರ ತಿಳಿಸಿದೆ.
ಫೆಬ್ರವರಿ 26 ರಂದು ಮಹಾ ಶಿವರಾತ್ರಿಯಂದು ಮಹಾಕುಂಭ ಕೊನೆಗೊಳ್ಳಲಿದೆ. ಮಹಾಶಿವರಾತ್ರಿಗೆ ಇನ್ನೇನು ಹತ್ತೊಂಬತ್ತು ದಿನಗಳು ಮಾತ್ರ ಉಳಿದಿವೆ. ಅಷ್ಟರೊಳಗೆ, 50 ಕೋಟಿ ಭಕ್ತಾದಿಗಳು ಕುಂಭಮೇಳದಲ್ಲಿ ಭಾಗವಹಿಸಬಹುದು ಎಂದು ಸರಕಾರ ಲೆಕ್ಕ ಹಾಕಿದೆ.
ದೇಶ ಮಾತ್ರವಲ್ಲ ವಿದೇಶಗಳಿಂದಲೂ ಜನರು ಕುಂಭಮೇಳದಲ್ಲಿ ಭಾಗವಹಿಸುತ್ತಿದ್ದಾರೆ. ಹೆಚ್ಚು ಕಡಿಮೆ ಒಂದು ತಿಂಗಳಿನಿಂದಲೂ ಪ್ರಯಾಗರಾಜ್ ನಲ್ಲಿ ಅಚ್ಚುಕಟ್ಟಾದ ವ್ಯವಸ್ಥೆ ನಡೆಯುತ್ತಿದ್ದು, ಕೋಟ್ಯಂತರ ಭಕ್ತರು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು ಪುನೀತರಾಗುತ್ತಿದ್ದಾರೆ. ಇನ್ನೂ 19 ದಿನಗಳು ಬಾಕಿ ಉಳಿದಿದ್ದು, ಜನರ ಮಹಾಪೂರವು ದಿನನಿತ್ಯವೆಂಬಂತೆ ಪ್ರಯಾಗರಾಜ್ ಮತ್ತು ಅಯೋಧ್ಯೆಯೆಡೆಗೆ ಹರಿದು ಬರುತ್ತಿದೆ.
