
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯು ಕೇಂದ್ರ ಕಚೇರಿಯ ಕಟ್ಟಡದ ಮುಖ್ಯದ್ವಾರದ ನಾಮ ಫಲಕದಲ್ಲಿ ‘ಮಂಗಳೂರು ಮಹಾನಗರ ಪಾಲಿಕೆ’ ಎಂಬ ತುಳು ಲಿಪಿಯ ಸಾಲನ್ನು ಸೇರಿಸಿ ಮಾತೃಭಾಷೆಗೆ ಗೌರವ ನೀಡಿದೆ.
ಸೋಮವಾರದಂದು ಮೇಯರ್ ಮನೋಜ್ ಕುಮಾರ್ ಕೋಡಿಕಲ್ ಅವರು ಈ ನಾಮಫಲಕವನ್ನು ಅನಾವರಣಗೊಳಿಸಿದರು.
ಕಚೇರಿಗಳಲ್ಲೂ ತುಳು ಲಿಪಿಗೆ ಮಹತ್ವ ಸಿಗಬೇಕು ಎಂದು ಹೋರಾಟ ನಡೆಸುತ್ತಿರುವ ತುಳು ಸಂಘಟನೆಗಳ ಒತ್ತಾಸೆಗೆ ಮನ್ನಣೆ ನೀಡುವ ಸಲುವಾಗಿ ಪಾಲಿಕೆಯು ಈ ನಿರ್ಧಾರ ಕೈಗೊಂಡಿದೆ. ಇದು ತುಳು ಸಂಘಟನೆಗಳ ಹೋರಾಟಕ್ಕೆ ಸಂದ ಗೌರವ ಎಂದು ಮನೋಜ್ ಕುಮಾರ್ ಹೇಳಿದರು.
ತುಳು ಲಿಪಿ ಬಳಕೆ ಉತ್ತೇಜಿಸಲು ನಾವು ಪಾಲಿಕೆಯ ಕೇಂದ್ರ ಕಚೇರಿಯ ಮುಖ್ಯದ್ವಾರದ ಬಳಿಯ ಮುಖ್ಯ ನಾಮಫಲಕದಲ್ಲೇ ಅದಕ್ಕೆ ಸ್ಥಾನ ಕಲ್ಪಿಸಿದ್ದೇವೆ. ಸುರತ್ಕಲ್ ಮತ್ತು ಕದ್ರಿಯಲ್ಲಿರುವ ಪಾಲಿಕೆಯ ವಲಯ ಕಚೇರಿಗಳ ನಾಮಫಲಕಗಳಲ್ಲೂ ತುಳು ಲಿಪಿಯನ್ನು ಅಳವಡಿಸಿಕೊಳ್ಳಲು ಕ್ರಮ ವಹಿಸಲಿದ್ದೇವೆ. ಪಾಲಿಕೆಯ ಕುದ್ಮುಲ್ ರಂಗರಾವ್ ಪುರಭವನ ಮತ್ತು ಉರ್ವದ ಅಂಬೇಡ್ಕರ್ ಭವನದ ನಾಮಫಲಕಗಳಲ್ಲೂ ತುಳು ಲಿಪಿಯನ್ನು ಬಳಸಲು ಕ್ರಮ ವಹಿಸುತ್ತೇನೆ. ನಗರವನ್ನು ಪ್ರವೇಶ ದ್ವಾರಗಳ ಬಳಿಯೂ ತುಳುವಿನಲ್ಲಿ ಸ್ವಾಗತ ಕೋರುವ ಫಲಕಗಳನ್ನು ಅಳವಡಿಸಲಿದ್ದೇವೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಇತರ ನಗರ ಸ್ಥಳೀಯ ಸಂಸ್ಥೆಗಳೂ ತಮ್ಮ ನಾಮ ಫಲಕಗಳಲ್ಲಿ ತುಳು ಲಿಪಿಯನ್ನು ಬಳಸುವುದಕ್ಕೆ ಇದು ಪ್ರೇರಣೆ ಆಗಲಿದೆ ಎಂದರು.
ತುಳುವಿಗೆ ಪ್ರತ್ಯೇಕ ರಾಜ್ಯ ಬೇಕು ಎಂದು ನಾವು ಕೇಳುವುದಿಲ್ಲ. ಆದರೆ ರಾಜ್ಯದಲ್ಲಿ ಅದಕ್ಕೆ ಅಧಿಕೃತ ಭಾಷೆಯ ಸ್ಥಾನಮಾನವನ್ನಾದರೂ ನೀಡಬೇಕು. ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ತುಳುವನ್ನು ಸೇರ್ಪಡೆಗೊಳಿಸಬೇಕು ಎಂಬುದು ನಮ್ಮ ಬೇಡಿಕೆ. ಬಜಪೆಯ ಅಂತರರಾಷ್ಟ್ರೀಯ ವಿಮಾನನಿಲ್ದಾಣ, ನವಮಂಗಳೂರು ಬಂದರು ಹಾಗೂ ರೈಲು ನಿಲ್ದಾಣಗಳ ನಾಮಫಲಕಗಳಲ್ಲೂ ತುಳು ಲಿಪಿಯನ್ನು ಅಳವಡಿಸಿಕೊಳ್ಳುವಂತೆ ಶಾಸಕರು ಮತ್ತು ಸಂಸದರು ಸರ್ಕಾರವನ್ನು ಒತ್ತಾಯಿಸಬೇಕು ಎಂದರು.
ಶಾಸಕ ಡಾ.ವೈ.ಭರತ್ ಶೆಟ್ಟಿ, ಪಾಲಿಕೆಯ ವಿರೋಧ ಪಕ್ಷದ ನಾಯಕ ಅನಿಲ್ ಕುಮಾರ್, ಮಾಜಿ ಮೇಯರ್ ಕೆ.ಭಾಸ್ಕರ ಮೊಯಿಲಿ ಹಾಗೂ ವಿವಿಧ ತುಳು ಸಂಘಟನೆಗಳ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
