
ಉಡುಪಿ: ಪರ್ಯಾಯ 2026 ರ ಪೂರ್ವಭಾವಿಯಾಗಿ ಅಕ್ಕಿ ಮುಹೂರ್ತವನ್ನು ಮಾರ್ಚ್ 6 ರಂದು ಗುರುವಾರ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ ನಡೆಸಿದರು. 2026 ಜನವರಿ 18 ರಂದು ಪರ್ಯಾಯೋತ್ಸವ ನಡೆಯಲಿದ್ದು, ವೇದವರ್ಧನ ತೀರ್ಥರು ಪೀಠವನ್ನೇರಲಿದ್ದಾರೆ.
ಅಕ್ಕಿ ಮುಡಿಯನ್ನು ರಥಬೀದಿಯ ಸುತ್ತಲೂ ಚಿನ್ನದ ರಥದಲ್ಲಿ ಮೆರವಣಿಗೆ ಕೊಂಡೊಯ್ಯಲಾಯಿತು. ಬಳಿಕ ಅನಂತೇಶ್ವರ, ಚಂದ್ರಮೌಳೇಶ್ವರ ಮತ್ತು ಶ್ರೀ ಕೃಷ್ಣ ಮಠದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
ಪರ್ಯಾಯ ಆಚರಣೆಯ ಮೊದಲು ನಡೆಯುವ ನಾಲ್ಕು ಮುಹೂರ್ತಗಳಲ್ಲಿ “ಅಕ್ಕಿ ಮುಹೂರ್ತ” ಎರಡನೆಯದು. ಎಲ್ಲಾ ಎಂಟು ಮಠ ಸ್ವಾಮೀಜಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಅಷ್ಟಮಠದ ಕಿರಿಯ ಸ್ವಾಮೀಜಿಗಳಾದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ ಅವರನ್ನು ಕೆಲವು ವರ್ಷಗಳ ಹಿಂದೆ ಶಿರೂರು ಮಠದ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ಜನವರಿ 18, 2026 ರಂದು ನಡೆಯಲಿರುವ ಪರ್ಯಾಯದಲ್ಲಿ ವೇದವರ್ಧನ ತೀರ್ಥ ಸ್ವಾಮೀಜಿ ಸರ್ವಜ್ಞ ಪೀಠದ ನೇತೃತ್ವವನ್ನು ವಹಿಸಿಕೊಳ್ಳುತ್ತಾರೆ.
ಈ ಸಂದರ್ಭದಲ್ಲಿ ಶಾಸಕ ಯಶಪಾಲ್ ಸುವರ್ಣ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ರಾಜಕೀಯ ಮುಖಂಡರಾದ ಮುನಿಯಾಲ್ ಉದಯ್ ಕುಮಾರ್ ಶೆಟ್ಟಿ, ಕೃಷ್ಣಮೂರ್ತಿ ಆಚಾರ್ಯ, ಕೌನ್ಸಿಲರ್ ಅಮೃತ ಕೃಷ್ಣಮೂರ್ತಿ, ಬಡಗುಬೆಟ್ಟು ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
