ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್, ಆತನ ಗೆಳತಿ ಪವಿತ್ರಾ ಗೌಡ ಹಾಗೂ ಇತರ 11 ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ನಟ ದರ್ಶನ್ ಅರೆಸ್ಟ್ ನಿಂದಾಗಿ ಚಿತ್ರರಂಗ ಹಾಗೂ ಪತ್ನಿ ವಿಜಯಲಕ್ಷ್ಮೀ ಅವರಿಗೆ ಆಘಾತ ಉಂಟಾಗಿದೆ. ವಿಜಯಲಕ್ಷ್ಮೀ ಅವರು ಯಾರ ಕಾಂಟೆಕ್ಟ್ ಗೂ ಸಹ ಸಿಕ್ಕಿಲ್ಲ, ಅಲ್ಲದೇ ಯಾವುದೇ ಹೇಳಿಕೆಯನ್ನೂ ಕೂಡ ನೀಡಿಲ್ಲ. ಈ ನಡುವೆ ವಿಜಯಲಕ್ಷ್ಮೀ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಾಕಿದ್ದ ಪತಿಯೊಂದಿಗಿನ ಪ್ರೊಫೈಲ್ ಫೋಟೋವನ್ನು ತೆಗೆದು ಹಾಕುವುದರ ಜೊತೆಗೆ ದರ್ಶನ್ ಅವರನ್ನು ಅನ್ ಫಾಲೋ ಮಾಡಿದ್ದು, ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ.
ಮಂಗಳವಾರ ರಾತ್ರಿ ದಶನ್ ಸೇರಿ 11 ಆರೋಪಿಗಳು ಪೊಲೀಸ್ ಠಾಣೆಯಲ್ಲಿ ಕಾಲ ಕಳೆದಿದ್ದು, ಇಂದು ಪೊಲೀಸರು ಆರೋಪಿಗಳ ವಿಚಾರಣೆ ನಡೆಸಲಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ದರ್ಶನ್ ಅವರನ್ನು ಅನ್ ಫಾಲೋ ಮಾಡಿದ್ದಾರೆ. ಅಲ್ಲದೇ ಪ್ರೊಫೈಲ್ ಫೋಟೋವನ್ನೂ ಕೂಡ ಡಿಲೀಟ್ ಮಾಡಿರುವುದು ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಂತಾಗಿದೆ.
ಇನ್ನು, ನಟ ದರ್ಶನ್, ಪವಿತ್ರಾ ಗೌಡ ಸೇರಿ ಉಳಿದ 11ಮಂದಿ ಆರೋಪಿಗಳು 6 ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿರಲಿದ್ದಾರೆ. ಪೊಲೀಸ್ ಕಸ್ಟಡಿಯಲ್ಲಿರುವ ದರ್ಶನ್ ಮೌನಕ್ಕೆ ಶರಣಾಗಿದ್ದು, ನಿನ್ನೆ ಮಧ್ಯಾಹ್ನದಿಂದ ಊಟ, ತಿಂಡಿ ಏನೂ ಸೇವನೆ ಮಾಡುತ್ತಿಲ್ಲ ಎಂದು ಹೇಳಲಾಗಿದ್ದು, ನಿನ್ನೆ ರಾತ್ರಿ ಒಂದು ಲೋಟ ಮಜ್ಜಿಗೆ ಹಾಗೂ ಬಿಸ್ಕೆಟ್ ಮಾತ್ರ ತಿಂದಿದ್ದರಂತೆ.
ಘಟನೆ ಹಿನ್ನೆಲೆ: ಚಿತ್ರದುರ್ಗದ ರೇಣುಕಾಸ್ವಾಮಿ ದರ್ಶನ್ ಗೆಳತಿ ಪವಿತ್ರಾ ಅವರಿಗೆ ಅಶ್ಲೀಲ ಸಂದೇಶವನ್ನು ಕಳುಹಿಸಿದ್ದರು ಎನ್ನುವ ಕಾರಣಕ್ಕೆ ಆತನನ್ನು ಬೆಂಗಳೂರಿಗೆ ಕರೆಸಿ ಶೆಡ್ ಒಂದರಲ್ಲಿ ಕೂಡಿ ಹಾಕಿ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಬಳಿಕ ಆತನನ್ನು ಕೊಲೆಗೈದು ಮೋರಿಗೆ ಎಸೆದಿದ್ದಾರೆ ಎನ್ನಲಾಗಿದೆ. ಬೀದಿ ನಾಯಿಗಳು ಶವವನ್ನು ಚರಂಡಿಯಿಂದ ಎಳೆದುಕೊಂಡು ಹೋಗುತ್ತಿರುವುದನ್ನು ಕಂಡ ನಿವಾಸಿಗಳು ಕೊಲೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತನಿಖೆ ಬಳಿಕ ನಟ ದರ್ಶನ್, ಪವಿತ್ರಾ ಗೌಡ ಮತ್ತು ದರ್ಶನ್ ಸಹಚರರಾದ ವಿನಯ್, ಆರ್. ನಾಗರಾಜ್, ಎಂ. ಲಕ್ಷ್ಮಣ್, ಪ್ರದೋಷ್, ಪವನ್, ದೀಪಕ್ ಕುಮಾರ್, ನಂದೀಶ್, ಕಾರ್ತಿಕ್, ನಿಖೀಲ್, ರಾಘವೇಂದ್ರ, ಕೇಶವ ಮೂರ್ತಿ ಅವರನ್ನು ಬಂಧಿಸಿದ್ದಾರೆ.
