
ಬೆಂಗಳೂರು:ಸ್ಯಾಂಡಲ್ ವುಡ್ ನಟ ,ಚಾಲೆಂಜಿಗ್ ಸ್ಟಾರ್ ದರ್ಶನ್ ಸುದ್ದಿ ಜೋರಾಗಿಯೇ ಸದ್ದು ಮಾಡುತ್ತಿದೆ. ಇಷ್ಟು ಹೀನಾಯ ಕೃತ್ಯ ದರ್ಶನ್ ನಿಂದ ಸಾಧ್ಯನಾ? ಎಂದು ದರ್ಶನ್ ಅಭಿಮಾನಿಗಳಿಗೆ ಬಾಯಿ ಮೇಲೆ ಬೆರಳಿಡುವಂತೆ ಆಗಿದೆ. ದರ್ಶನ್ ಆಪ್ತೆ ಹಾಗೂ ನಟಿ ಪವಿತ್ರಾ ಗೌಡಗೆ ರೇಣುಕಾ ಸ್ವಾಮಿ ಅನ್ನುವ ವ್ಯಕ್ತಿ ಅಶ್ಲೀಲವಾಗಿ ಮೆಸೇಜ್ ಮಾಡಿದ್ದರು ಎನ್ನುವ ನಿಟ್ಟಿನಲ್ಲಿ ದರ್ಶನ್ ಸೂಚನೆ ಮೇರೆಗೆ ರೇಣುಕಾಸ್ವಾಮಿಯನ್ನು ಕೊಲೆ ಮಾಡಲಾಗಿದೆಯಂತೆ ಎನ್ನುವ ಸುದ್ದಿ ಈಗ ಜೋರಾಗಿಯೇ ಸದ್ದು ಮಾಡುತ್ತಿದೆ.
ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಸದ್ಯ ನಟ ದರ್ಶನ್ ಪೊಲೀಸರ ವಶದಲ್ಲಿದ್ದಾರೆ. ಕೊಲೆ ಆರೋಪದ ಮೇಲೆ ಮೈಸೂರಿನಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಚಿತ್ರದುರ್ಗ ಮೂಲದ ಯುವಕನ ಹತ್ಯೆ ಪ್ರಕರಣದಲ್ಲಿ ದರ್ಶನ್ ಸೇರಿ 13 ಆರೋಪಿಗಳ ವಿಚಾರಣೆ ನಡೆಯುತ್ತಿದೆ. ವಿವಿಧ ಮೂಲಗಳ ಪ್ರಕಾರ, ಜೂನ್ 8 ರಂದು ರೇಣುಕಾ ಸ್ವಾಮಿ ಅವರ ಮೇಲೆ ಹಲ್ಲೆ ನಡೆಸಿ, ಹತ್ಯೆ ಮಾಡಲಾಗಿದೆ. ದರ್ಶನ್ ಸೇರಿದಂತೆ ಅವರ ಆಪ್ತರು ನಾಲ್ವರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ ಸುಮ್ಮನಹಳ್ಳಿಯ ರಾಜಕಾಲುವೆಯಲ್ಲಿ ಶವವನ್ನು ಎಸೆಯಲಾಗಿತ್ತು. ನಂತರ ಮೃತದೇಹವನ್ನು ಬೀದಿ ನಾಯಿಗಳು ಎಳೆದಾಡುವಾಗ, ಅಪಾರ್ಟ್ಮೆಂಟ್ನ ಸೆಕ್ಯೂರಿಟಿಯೊಬ್ಬರು ಗಮನಿಸಿ, ಪೊಲೀಸರಿಗೆ ದೂರು ನೀಡಿದ ಮೇರೆಗೆ ಪೊಲೀಸರು ಕಾರ್ಯಾಚರಣೆ ಮಾಡಿದ್ದಾರೆ.
ಪ್ರಕರಣದ ತನಿಖೆ ಚುರುಕುಗೊಂಡಷ್ಟು ಅನೇಕ ಮಾಹಿತಿಗಳು ಲಭ್ಯವಾಗುತ್ತಿದ್ದು, ದರ್ಶನ್ ಪ್ರಕರಣದಿಂದ ರಿಲೀಫ್ ಆಗುವ ಯಾವ ಸೂಚನೆಯೂ ಕಾಣಿಸುತ್ತಿಲ್ಲ ಎನ್ನಲಾಗಿದೆ. ದರ್ಶನ್ ಈಗಾಗಲೇ ಕೆಲವು ಬಿಗ್ ಬಜೆಟ್ ಮೂವಿ ಒಪ್ಪಿಕೊಂಡಿದ್ದಾರೆ. ಡೆವಿಲ್ ಸಿನಿಮಾದ ಚಿತ್ರೀಕರಣವೂ ಬಹುತೇಕವಾಗಿ ಮುಗಿದಿದೆ ಎನ್ನಲಾಗಿದ್ದು, ಈ ವರ್ಷದಲ್ಲಿ ರಿಲೀಸ್ ಆಗಬೇಕಿತ್ತು. ದರ್ಶನ್ ಅವರ 60 ನೇ ಸಿನಿಮಾ ಸಿದ್ಧತೆಯೂ ನಡೆದಿದೆ ಎನ್ನಲಾಗಿದ್ದು, ನಿರ್ಮಾಪಕ ಸೂರಪ್ಪ ಬಾಬು ಅವರ ಜೊತೆ ಅಡ್ವಾನ್ಸ್ ಕೂಡಾ ಪೇ ಮಾಡಿದ್ದಾರೆ ಎನ್ನಲಾಗಿದೆ. ಇಷ್ಟೇ ಅಲ್ಲದೆ ದರ್ಶನ್ ಅವರಿಗೆ ಅಡ್ವಾನ್ಸ್ ನೀಡಿದ ಕೆಲವು ನಿರ್ಮಾಪಕರು ಕೂಡಾ ಕಾಯುತ್ತಿದ್ದಾರೆ. ಖ್ಯಾತ ನಿರ್ದೇಶಕ ಪ್ರೇಮ್ ಅವರ ಜೊತೆಗೂ ದರ್ಶನ್ ಸಿನಿಮಾ ಒಪ್ಪಿಕೊಂಡಿದ್ದಾರೆ ಎನ್ನಲಾಗಿದ್ದು ಇದಕ್ಕೂ ಸಮಸ್ಯೆ ಯಾಗಲಿದೆ. ಹಾಗಾಗಿ ದರ್ಶನ್ ಮುಂದಿನ ಸಿನಿಮಾಗಳಿಗೆ ಭಾರಿ ಹೊಡೆತ ಬಿದ್ದಿದ್ದು ಹಣ ಹೂಡಿದ ನಿರ್ಮಾಪಕರಿಗೂ ನಷ್ಟ ಉಂಟಾಗಲಿದೆ.
