ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಜೈಲಿನಲ್ಲಿದ್ದಾರೆ. ಈ ನಡುವೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಪವಿತ್ರ ಗೌಡ ಅವರು ದರ್ಶನ್ ಅವರ ಗೆಳತಿ ಅಷ್ಟೇ ದರ್ಶನ್ ಪತ್ನಿ ಅಲ್ಲಾ ಎಂದು ಸ್ಪಷ್ಟನೆ ನೀಡಿದ್ದು, ಈ ಕುರಿತು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಪತ್ರವನ್ನು ಕೂಡ ಬರೆದಿದ್ದಾರೆ ಎನ್ನಲಾಗಿದೆ.
ರೇಣುಕಾಸ್ವಾಮಿ ಹತ್ಯೆ ಬಳಿಕ ಆರೋಪಿಗಳು ಅರೆಸ್ಟ್ ಮಾಡಿದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ಪೊಲೀಸರು ಆಯುಕ್ತರು ಪವಿತ್ರಾ ಗೌಡ ಅವರು ದರ್ಶನ್ ಅವರ ಪತ್ನಿ ಎಂದು ಹೇಳಿದ್ದರು. ಆ ಬಳಿಕ ರಾಷ್ಟ್ರಮಟ್ಟದ ಮಾಧಶ್ಯಮಗಳಲ್ಲಿ ಕೂಡ ಅದೇ ರೀತಿ ಸುದ್ದಿ ಪ್ರಸಾರ ಆಯಿತು. ಈ ಹಿನ್ನೆಲೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ನೀವು ಈ ರೀತಿಯ ಹೇಳಿಕೆ ನೀಡಿರುವುದರಿಂದ ರಾಷ್ಟ್ರಮಟ್ಟದ ಮಾಧ್ಯಮದವರೂ ಕೂಡ ದರ್ಶನ್ ದಂಪತಿ ಅರೆಸ್ಟ್ ಎಂದು ಸುದ್ದಿ ಮಾಡಿದರು.ಇದರಿಂದಾಗಿ ನಾನು ಮತ್ತು ನನ್ನ ಮಗ ಮುಂದಿನ ದಿನಗಳಲ್ಲಿ ತೊಂದರೆ ಅನುಭವಿಸುವಂತಾಗಬಾರದು. ಪವಿತ್ರಾ ಅವರಿಗೆ ಸಂಜಯ್ ಸಿಂಗ್ ಎನ್ನುವವರ ಜೊತೆ ಮದುವೆಯಾಗಿ ಅವರಿಂದ ಒಬ್ಬಳು ಮಗಳನ್ನು ಪಡೆದಿದ್ದರು ಎನ್ನುವ ಕುರಿತು ಸ್ಪಷ್ಟ ಮಾಹಿತಿ ಪೊಲೀಸ್ ದಾಖಲೆಗಳಲ್ಲಿ ಇರಲಿ ಎಂದು ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಇನ್ನು, ನಾನು ಮಾತ್ರ ದರ್ಶನ್ ಅವರನ್ನು ಕಾನೂನಾತ್ಮಕವಾಗಿ ಮದುವೆ ಆದವಳು.ಧರ್ಮಸ್ಥಳದಲ್ಲಿ ೨೦೦೩ರ ಮೇ ೧೯ರಂದು ನಮ್ಮ ಮದುವೆ ನಡೆದಿತ್ತು ಎಂದು ಹೇಳಿದ್ದಾರೆ. ಇನ್ನು ದರ್ಶನ್ ಅವರು ಇಂದಿನವರೆಗೆ ಜೈಲಿನಲ್ಲಿರಲಿದ್ದು, ಇಂದು ಮತ್ತೆ ಅವರನ್ನು ಕೋರ್ಟ್ಗೆ ಹಾಜರುಪಡಿಸಬೇಕಾಗಿದೆ. ಇಂದು ಅವರ ಭವಿಷ್ಯ ನಿರ್ಧಾರ ಆಗಲಿದೆ.
