ಬಣ್ಣ ಬಣ್ಣದ ವಿವಿಧ ಬಗೆಯ ಬಟ್ಟೆ ನೇಯ್ದು ಜನರ ಬದುಕಿಗೆ ಹೊಳಪು ನೀಡುವ ನೇಕಾರರ ಬದುಕು ಇದೀಗ ಬಣ್ಣ ಇಲ್ಲದಂತಾಗಿದೆ. ಬೆಲೆ ಏರಿಕೆ, ಕಚ್ಚಾವಸ್ತುಗಳು ಆರ್ಥಿಕ ಸಮಸ್ಯೆ ವಿವಿಧ ಕಾರಣಗಳಿಂದ ನೇಕಾರರು ಆತ್ಮಹತ್ಯೆ ಮಾಡಿ ಕೊಳ್ಳುತ್ತಿದ್ದಾರೆ. ಸರಕಾರ ನೇಕಾರರ ಅಭಿವೃದ್ಧಿಗೆ ಸಾಲ ಸೌಲಭ್ಯ ರೂಪಿಸಿದ್ರೂ ಯೋಜನೆಗಳ ಸೌಲಭ್ಯಗಳನ್ನು ಪಡೆಯಲು ನಿಯಮಗಳೇ ಅಡ್ಡಿಯಾಗುತ್ತಿದ್ದು ಸುಲಭಕ್ಕೆ ಸಾಲ ಸೌಲಭ್ಯ ವೂ ನೇಕಾರರಿಗೆ ಸಿಗುತ್ತಿಲ್ಲ.
ನಾಲ್ಕು ವರ್ಷಗಳಲ್ಲಿ 42 ನೇಕಾರರ ಆತ್ಮಹತ್ಯೆ
ಆರ್ಥಿಕ ಸಂಕಷ್ಟದಿಂದ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ಸುಮಾರು 42 ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 24, ಬಾಗಲಕೋಟೆ 5, ಬೆಂಗಳೂರು ಗ್ರಾಮಾಂತರ 4, ರಾಮನಗರ 3, ತುಮಕೂರು 2, ಬೆಂಗಳೂರು ನಗರ, ಧಾರವಾಡ, ಚಿಕ್ಕಬಳ್ಳಾಪುರ, ವಿಜಯಪುರ ಜಿಲ್ಲೆಯಲ್ಲಿ ತಲಾ ಒಬ್ಬರಂತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನೇಕಾರರ ಸಮಸ್ಯೆ ಹೆಚ್ಚಳ
ಕಚ್ಚಾ ನೂಲಿನ ಬೆಲೆ, ರೇಷ್ಮೆ ಬೆಲೆ ದುಪ್ಪಟ್ಟಾಗಿದ್ದು ಮಧ್ಯವರ್ತಿಗಳಿಂದ ಬೆಲೆಯು ಏರಿಕೆ ಯಾಗಿದ್ದು ಸೀರೆಗಳ ಬೆಲೆಯಂತೂ ಏರಿಕೆಯಾಗಿಲ್ಲ.ಹೀಗಾಗಿ ನೇಯ್ದ ಸೀರೆಗಳನ್ನು ಕಡಿಮೆ ಲಾಭಕ್ಕೆ ಮಾರಾಟ ಮಾಡಬೇಕಾದ ಸ್ಥಿತಿ ನೇಕಾರರಿಗೆ ಉಂಟಾಗಿದೆ.ಸಾಲ ಸೌಲಭ್ಯದ ಯೋಜನೆಗಳಿದ್ದರೂ ಬ್ಯಾಂಕುಗಳು ಸಾಲ ನೀಡಲ್ಲ. ಹೆಚ್ಚಿನ ಬಡ್ಡಿಗೆ ಖಾಸಗಿ ಸಾಲ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ.
ಐದು ವರ್ಷಗಳಾದರೂ ಪರಿಹಾರ ಇಲ್ಲ
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮದಡಿ ಗುಂಪು ವಿಮಾ ಯೋಜನೆಯಡಿ ನೇಕಾರರ ಕುಟುಂಬದ ಸದಸ್ಯರಿಗೆ ತಲಾ 2 ಲಕ್ಷದಂತೆ ಪರಿಹಾರ ನೀಡುತ್ತಿದ್ದ ಸೌಲಭ್ಯ ಐದು ವರ್ಷಗಳಿಂದ ಇನ್ನೂ ಬಂದಿಲ್ಲ.ನೇಕಾರರಿಗೆ ರಿಯಾಯಿತಿ ದರದಲ್ಲಿವಿದ್ಯುತ್ ಮಗ್ಗ ಖರೀದಿಗೆ ಸರಕಾರದ ಯೋಜನೆಯಡಿ ಅವಕಾಶ ಇದ್ದರೂ ಕಟ್ಟಡದ ದಾಖಲಾತಿಗಳಿಂದ ಸೌಲಭ್ಯ ದಿಂದಲೂ ವಂಚಿತರಾಗುತ್ತಿದ್ದಾರೆ.
ಪರಿಹಾರ ಏನು?
ನೇಕಾರರಿಗೆ ಕಚ್ಚಾ ವಸ್ತುಗಳು ಸುಲಭ ದರದಲ್ಲಿ ಕೈಗೆಟುಕುವಂತೆ ಮಾಡಬೇಕು.ಮದ್ಯವರ್ತಿಗಳ ಹಾವಳಿ ಕಡಿಮೆ ಮಾಡಿ, ಸರಕಾರದಿಂದ ಸಿಗುವ ಸೌಲಭ್ಯ ಗಳು ಸರಿಯಾದ ಸಮಯಕ್ಕೆ ನೇಕಾರರಿಗೆ ಜಮೆ ಯಾಗಬೇಕಿದೆ.ಇನ್ನು ರಾಜ್ಯದಲ್ಲಿ ನೇಕಾರರ ಆತ್ಮಹತ್ಯೆ ತಡೆಯುವ ನಿಟ್ಟಿನಲ್ಲಿ ನೇಕಾರ ಸಮ್ಮಾನ್, ಮಕ್ಕಳಿಗೆ ವಿದ್ಯಾರ್ಥಿ ವೇತನ, ಸಹಕಾರ ಸಂಘಗಳಲ್ಲಿ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವಂತಾಗಬೇಕು.
