ಬೆಂಗಳೂರು: ಈ ಬಾರಿ ಎಲೆಕ್ಷನ್ ನಡೆಯುವ ಸಂದರ್ಭ ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯನ್ನು ಹೊರಡಿಸಿ ಅದರಲ್ಲಿ 5ಗ್ಯಾರಂಟಿಗಳ ಕುರಿತು ಉಲ್ಲೇಖಿಸಿತ್ತು. ಅದರಂತೆ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ತಾವು ನೀಡಿರುವ ಭರವಸೆಗಳನ್ನು ಈಡೇರಿಸುವಲ್ಲಿ ನಿರತವಾಗಿದ್ದು, ಆ ಪ್ರಕಾರವಾಗಿ ಈಗಾಗಲೇ ನಾಲ್ಕು ಗ್ಯಾರಂಟಿಗಳಿಗೆ ಅಧಿಕೃತ ಆದೇಶವನ್ನು ಹೊರಡಿಸಿದೆ. ಆದರೆ ಇದೀಗ ಎಲ್ಲಾ ಗ್ಯಾರಂಟಿಗಳಿಗೂ ಕೆಲವೊಂದು ಷರತ್ತುಗಳನ್ನು ವಿಧಿಸಿ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅಂತೆಯೇ ಗೃಹ ಜ್ಯೋತಿ ಯೋಜನೆಯಲ್ಲಿಯೂ ಕೂಡ ಷರತ್ತುಬದ್ಧ ಮಾರ್ಗಸೂಚಿಯನ್ನು ಹೊರಡಿಸಿದೆ. ಅದರಲ್ಲಿ ಬಾಡಿಗೆದಾರರಿಗೆ ಈ ಯೋಜನೆಯ ಸೌಲಭ್ಯ ದೊರಕುವುದಿಲ್ಲ ಎಂದು ಹೇಳಲಾಗಿದೆ.
ಹೌದು, ಗೃಹ ಜ್ಯೋತಿ ಯೋಜನೆಯಡಿಯಲ್ಲಿ ಪ್ರತಿಯೊಂದು ಮನೆಗೂ 200 ಯೂನಿಟ್ ಕರೆಂಟ್ ಫ್ರೀ ಎಂದು ಹೇಳಲಾಗಿತ್ತು. ಸಿಎಂ ಸಿದ್ದರಾಮಯ್ಯ ಅವರು ಕೂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮನೆ ಮಾಲೀಕರೂ ಸೇರಿದಂತೆ ಬಾಡಿಗೆದಾರರಿಗೂ ಉಚಿತ ವಿದ್ಯುತ್ ಯೋಜನೆ ಸೌಲಭ್ಯ ದೊರೆಯಲಿದೆ ಎಂದಿದ್ದರು. ಆದರೆ, ಇದೀಗ ಇಂಧನ ಇಲಾಖೆಯ ಸಕಾರದ ಅಧೀನ ಕಾಯದಶಿ ಹೊರಿಡಿಸಿರುವಂತ ನಡವಳಿಯಲ್ಲಿ ಬಾಡಿಗೆದಾರರಿಗೆ ಈ ಸೌಲಭ್ಯ ಅನ್ವಯವಾಗುವುದಿಲ್ಲ ಎಂದು ಹೇಳಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಇಂಧನ ಇಲಾಖೆ ಸಚಿವ ಕೆ.ಜೆ. ಜಾರ್ಜ್, ಒಂದು ಆರ್ ಆರ್ ಸಂಖ್ಯೆಗೆ ಮಾತ್ರ ಉಚಿತ ವಿದ್ಯುತ್ ಎಂದು ತಿಳಿಸಿದ್ದಾರೆ. ಯಾರು ಎಷ್ಟೇ ಆರ್ ಆರ್ ನಂಬರ್ ಹೊಂದಿರಲಿ, ಆದರೆ ಒಂದು ಆರ್ ಆರ್ ನಂಬರ್ ಗೆ ಮಾತ್ರ ಈ ಯೋಜನೆಯ ಸೌಲಭ್ಯ ದೊರೆಯಲಿದೆ ಎನ್ನಲಾಗಿದೆ. ಆ ಮೂಲಕ ಬಾಡಿಗೆದಾರರಿಗೆ ಈ ಯೋಜನೆಯ ಸೌಲಭ್ಯ ದೊರಕುವುದಿಲ್ಲ ಎಂದು ಹೇಳಲಾಗಿದೆ.
