
ಉಡುಪಿ: ಶಂಕರಪುರದ ಸಾಲ್ಮರದಲ್ಲಿ ನೂತನವಾಗಿ ನಿರ್ಮಾಣಗೊಂಡ ಸಾಲ್ಮರ ಗೋವಿಂದ ಭಟ್ ಫ್ಯಾಮಿಲಿ ಟ್ರಸ್ಟ್ ನ ಕೃಷ್ಣವೇಣಿ ಆಶ್ರಯಧಾಮ ಹಾಗೂ ಕೃಷ್ಣವೇಣಿ ಆರ್ಯುವೇದ ಆಸ್ಪತ್ರೆಯನ್ನು ಸೋಮವಾರ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ಶ್ರೀಪಾದರು ಉದ್ಘಾಟಿಸಿದರು.
ಬಳಿಕ ಆಶೀರ್ಚನ ನೀಡಿದ ಶ್ರೀಗಳು ಆಯುರ್ವೇದ ಪದ್ದತಿ ನಮ್ಮ ದೇಶದ ಶ್ರೇಷ್ಠ ಔಷಧೀಯ ಪದ್ದತಿಯಾಗಿದ್ದು, ಇದು ವೈಜ್ಞಾನಿಕ ತಳಹದಿಯಿಂದ ಕೂಡಿದೆ. ಆ ಆರ್ಯುವೇದ ಪದ್ದತಿಯ ಬಗ್ಗೆ ನಾವು ತಿಳಿಯಬೇಕು. ಅದೆಲ್ಲವನ್ನು ತಿಳಿದಾಗ ಜಗತ್ತಿನಲ್ಲಿ ಶ್ರೇಷ್ಠ ರಾಷ್ಟ್ರವಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಶರೀರದ ಮೂಲ ಯಾವುದು ಎನ್ನುವುದರ ಬಗ್ಗೆ ಮಾಹಿತಿಯ ಕೊರತೆಗಳಿವೆ. ನಾಡಿಗಳೇ ಶರೀರದ ಮೂಲ. ನಾಡಿಗಳ ಬಗ್ಗೆ ಆಯುರ್ವೇದ ಹೇಳಿರುವುದೇ ಸತ್ಯ ಮತ್ತು ಆಯುರ್ವೇದ ಪದ್ದತಿ ಅದನ್ನು ಸರಿಯಾಗಿ ತಿಳಿದಿರಿವುದು. ನಮ್ಮ ಹಿರಿಯರ ಕಲ್ಪನೆ ಎಲ್ಲವೂ ಸರಿಯಾಗಿತ್ತು. ಕಾಯಿಲೆಗಳ ಮೂಲ ನಾಡಿಗಳು ಮತ್ತು ಹೊಕ್ಕಳು. ನಾಡಿಗಳು ಗಟ್ಟಿಯಾದಗ ಮಾತ್ರ ಶರೀರ ಗಟ್ಟಿಯಾಗಿರುತ್ತೆ. ಯಾವ ಭಾಗದಲ್ಲಿ ಹೇಗೆ ಎಷ್ಟು ರಕ್ತ ಸಂಚಲನ ಮಾಡುವುದು ತಿಳಿದಿರುವುದು ನಾಡಿಗಳಿಗೆ ಮಾತ್ರ. ಹಾಗಾಗಿ ನಾಡಿಗಳು ಪ್ರತಿಯೊಂದು ಭಾಗಕ್ಕೆ ಸರಿಯಾಗಿ ರಕ್ತ ಸಂಚಾರ ಮಾಡುತ್ತೆ. ಅದೆಲ್ಲವೂ ನಮ್ಮ ಹಿರಿಯರಿಗೆ ತಿಳಿದಿದ್ದು, ಆದ್ರೆ ಈಗಿನವರಿಗೆ ಈ ಪದ್ದತಿ ತಿಳಿದಿಲ್ಲ ಎಂದರು.
ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿ,
60 ವರ್ಷಗಳ ಬಳಿಕ ಉದ್ಯೋಗ ನಿವೃತ್ತಿಯಾದ ಅನಂತರ ನಮ್ಮ ಜೀವನ ಕೊನೆಯ ಭಾಗ ಅನ್ಕೊಂಡು ಬಿಡುತ್ತೇವೆ. ಆದರೆ ನಮ್ಮ ಮನಸ್ಸಿನ ಹುಮ್ಮಸ್ಸು ಚೈತನ್ಯತೆ ನಮ್ಮ ಚಟುವಟಿಗಳನ್ನು ಹೆಚ್ಚಿಸುತ್ತೆ. ಕೋಟ ಶಿವರಾಮ ಕಾರಂತರು ತೊಂಬತ್ತನೇ ವಯಸ್ಸಿನಲ್ಲಿ ಕಾಲಿಗೆ ಗೆಜ್ಜೆ ಕಟ್ಟಿ ಕುಣಿಯುವುದನ್ನೂ ನಾನು ನೋಡಿದ್ದೆ. ನಮಗೆ ಸಮಸ್ಯೆ ಆದಾಗ ಅದನ್ನು ಎದುರಿಸುವಂತ ಚೈತನ್ಯ ತುಂಬುವಂತ ಸಂಸ್ಥೆಗಳು ಬೇಕು. ಎಪ್ಪತ್ತೈದು ದಾಟಿದ ನಂತರ ಸಾಧನೆ ಮಾಡಿದವರು ಬೇಕಾದಷ್ಟು ಜನ ಇದ್ದಾರೆ. ಇಂಥ ಸಂಸ್ಥೆಯನ್ನು ಹುಟ್ಟುಹಾಕಿದ ಗೋವಿಂದ ಭಟ್ ಫ್ಯಾಮಿಲಿ ಅತ್ಯುತ್ತಮವಾದ ಕೆಲಸ ಮಾಡಿದ್ದಾರೆ ಎಂದರು.
ಟ್ರಸ್ಟ್ ನ ವ್ಯವಸ್ಥಾಪಕ ನಿರ್ದೇಶಕ ಹರಿದಾಸ ಭಟ್ ಪ್ರಸ್ತಾವನೆಗೈದು, ನಮಗೆ ಈ ಸಂಸ್ಥೆಯಲ್ಲಿ ಯಾವುದೇ ಲಾಭದ ಯೋಚನೆ ಇಲ್ಲ. ನಮ್ಮಅಜ್ಜನ ಜಾಗ ಸಾಮಾಜಿಕವಾಗಿ ನಡೆಸಬೇಕು ಎಂಬ ನಿಟ್ಟಿನಲ್ಲಿ ಈ ಸಂಸ್ಥೆಯನ್ನು ಸ್ಥಾಪನೆ ಮಾಡಲಾಗಿದೆ. ಸುಮಾರು ಹತ್ತು ವರ್ಷಗಳಿಂದ ಈ ಚಿಂತನೆ ನಡೆಸಿದ್ದೇವೆ ಎಂದರು.
ಈ ಸಂದರ್ಭ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ನಿಟ್ಟೆ ಕಾಲೇಜಿನ ಪ್ರಾಂಶುಪಾಲರಾದ ನಿರಂಜನ ಚಿಪ್ಲೂಣ್ಕರ್, ಮಾಜಿ ಜಿ.ಪಂ. ಸದಸ್ಯೆ ಗೀತಾಂಜಲಿ ಸುವರ್ಣ, ಇನ್ನಂಜೆ ಗ್ರಾ.ಪಂ. ಅಧ್ಯಕ್ಷೆ ಮಾಲಿನಿ ಶೆಟ್ಟಿ, ಕಟಪಾಡಿ ಗ್ರಾ.ಪಂ ಅಧ್ಯಕ್ಷೆ ಪ್ರಭಾ ಶೆಟ್ಟಿ, ಕುರ್ಕಾಲು ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಪೂಜಾರಿ ಉಪಸ್ಥಿತರಿದ್ದರು. ಟ್ರಸ್ಟ್ ನ ಸದಸ್ಯರಾದ ಶಶಿಧರ ತಂತ್ರಿ ಸ್ವಾಗತಿಸಿ, ಟ್ರಸ್ಟಿ ಪದ್ಮನಾಭ ಭಟ್ ವಂದಿಸಿದರು. ವ್ಯವಸ್ಥಾಪಕರಾದ ರಮೇಶ್ ಮಿತ್ತಂತಾಯ ನಿರೂಪಿಸಿದರು.
