
ಉಡುಪಿ: ತಂತ್ರಜ್ಞಾನ ಯುಗದ ಈ ಕಾಲದಲ್ಲಿ ಎಲ್ಲವೂ ತಂತ್ರಜ್ಞಾನಮಯವಾಗಿರುವ ಕಳ್ಳರು ಹಿಂದೆ ಬೀಳಲು ಹೇಗೆ ಸಾಧ್ಯ? ಇಂದಿನ ಯುಗದಲ್ಲಿ ಮೊಬೈಲ್ ಫೋನಿನಲ್ಲಿ ಒಂದೇ ಗುಂಡಿಯನ್ನು ಒತ್ತುವ ಮೂಲಕ ಎಲ್ಲ ವ್ಯವಹಾರಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಕಳ್ಳರು ಕೂಡಾ ತಮ್ಮನ್ನು ತಾವು ಅಧುನೀಕರಿಸಿಕೊಂಡು ಸೈಬರ್ ಕಳ್ಳತನದಲ್ಲಿ ತಮ್ಮ ಕೈಚಳಕ ತೋರುತ್ತಿದ್ದಾರೆ.
ಸೈಬರ್ ವಂಚನೆ ಅಥವಾ ಕಳ್ಳತನವೆಂಬುದು ಜನಸಾಮಾನ್ಯರಿಗೆ ಮತ್ತು ಆಡಳಿತಕ್ಕೆ ಅತಿದೊಡ್ಡ ತಲೆನೋವಾಗಿರುವ ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪೋಲಿಸರು ಜಿಲ್ಲೆಯಲ್ಲಿರುವ ಎಲ್ಲ ಬೀಟ್ ವ್ಯಾಪ್ತಿಯಲ್ಲಿ ವಾಟ್ಸ್ಯಾಪ್ ಗ್ರೂಪ್ ಅನ್ನು ರಚಿಸಿದ್ದಾರೆ. ತನ್ಮೂಲಕ ಸೈಬರ್ ವಂಚನೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 24 ಪೊಲೀಸ್ ಠಾಣೆಗಳಿದ್ದು, ಆಯಾ ಠಾಣಾ ವ್ಯಾಪ್ತಿಯಲ್ಲಿ 15ರಿಂದ 20 ರಷ್ಟು ಬೀಟ್ಗಳಿವೆ. ಪ್ರತಿ ಗ್ರೂಪ್ ನಲ್ಲಿ 250 ಮಂದಿ ಸದಸ್ಯರಿದ್ದಾರೆ. ಗ್ರೂಪ್ ಗಳಲ್ಲಿ ಜಾಗೃತಿ ಮೂಡಿಸುವ ಸಂದೇಶಗಳನ್ನು ರವಾನಿಸಲಾಗುತ್ತಿದೆ.
ಸೈಬರ್ ವಂಚನೆಗಳನ್ನು ತಡೆಗಟ್ಟಲು ಸೆನ್ ಠಾಣೆಯ ಮೂಲಕ ಕರಪತ್ರಗಳ ಹಂಚಿಕೆ, ವಾಹನಗಳ ಮೂಲಕ ಮಾಹಿತಿ ನೀಡುವಿಕೆ, ಶಾಲಾ-ಕಾಲೇಜು ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಅರಿವು ಮೂಡಿಸುವ ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ. ಸೈಬರ್ ವಂಚನೆ ಪ್ರಕರಣಗಳನ್ನು ತಡೆಯಲು ಎಲ್ಲ ರೀತಿಯ ಪ್ರಯತ್ನಗಳನ್ನು ಕೈಗೊಳ್ಳಲಾಗುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ವಂಚನೆ ತಡೆಗಟ್ಟಲು ಸಾರ್ವಜನಿಕರಲ್ಲಿ ವಿವಿಧ ರೀತಿಯ ಜಾಗೃತಿ ಮೂಡಿಸಲಾಗುತ್ತಿದೆ. ಸೈಬರ್ ವಂಚನೆ ತಡೆಯಲು ನೀಡುವ ಸೂಚನೆ ಮತ್ತು ಮಾರ್ಗಸೂಚಿಗಳನ್ನು ನೇರವಾಗಿ ಸಾರ್ವಜನಿಕರಿಗೆ ಕಳುಹಿಸಲಾಗುತ್ತಿದೆ. ಇದರಿಂದ ವಂಚನೆಗೊಳಗಾದವರು ಯಾವುದೇ ಸಂಕೋಚವಿಲ್ಲದೆ ದೂರು ನೀಡಲು ಸಾಧ್ಯ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ| ಅರುಣ್ ಕೆ. ತಿಳಿಸಿದ್ದಾರೆ.
