Home ಕರ್ನಾಟಕ ಕರಾವಳಿ ಕ್ರೀಡೆಯ ಚುರುಕುತನ ಜನರಿಗೆ ನ್ಯಾಯ ನೀಡುವಲ್ಲಿಯೂ ಇರಬೇಕು:‌ ನ್ಯಾಯಧೀಶ ಕಿರಣ್.ಎಸ್.ಗಂಗಣ್ಣನವರ್

ಕ್ರೀಡೆಯ ಚುರುಕುತನ ಜನರಿಗೆ ನ್ಯಾಯ ನೀಡುವಲ್ಲಿಯೂ ಇರಬೇಕು:‌ ನ್ಯಾಯಧೀಶ ಕಿರಣ್.ಎಸ್.ಗಂಗಣ್ಣನವರ್

0
ಕ್ರೀಡೆಯ ಚುರುಕುತನ ಜನರಿಗೆ ನ್ಯಾಯ ನೀಡುವಲ್ಲಿಯೂ ಇರಬೇಕು:‌ ನ್ಯಾಯಧೀಶ ಕಿರಣ್.ಎಸ್.ಗಂಗಣ್ಣನವರ್

ಉಡುಪಿ: ಕ್ರೀಡಾಕೂಟದಿಂದ ವಕೀಲರ ವೃತ್ತಿ ಹಾಗು ವ್ಯಕ್ತಿತ್ವದ ಅನಾವರಣವಾಗಿದೆ. ಕ್ರೀಡೆಯ ಚುರುಕುತನ ಜನರಿಗೆ ನ್ಯಾಯ ನೀಡುವಲ್ಲಿಯೂ ಇರಬೇಕು.‌ ಕ್ರೀಡಾಪಟುಗಳಿಗೆ ಗುಣಮಟ್ಟದ ಸೇವೆ, ಸೌಲಭ್ಯಗಳನ್ನು ಉಡುಪಿ ವಕೀಲರ ಸಂಘವು ಒದಗಿಸಿದೆ. ಕ್ರೀಡಾಕೂಟದಲ್ಲಿ ವರ್ಷಂಪ್ರತಿ ಕ್ರೀಡಾಪಟುಗಳ ಪಾಲ್ಗೊಳ್ಳುವಿಕೆ ಹೆಚ್ಚಳವಾಗುತ್ತಿರುವುದು ಸಂತೋಷದಾಯಕವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಕಿರಣ್.ಎಸ್.ಗಂಗಣ್ಣನವರ್ ಹೇಳಿದರು.

ಉಡುಪಿ ವಕೀಲರ ಸಂಘದ 125 ನೇ ವರ್ಷದ ಶತಮಾನೋತ್ತರ ರಜತ ಮಹೋತ್ಸವದ ಮುಂದುವರಿದ ಭಾಗವಾಗಿ ಎಮ್‌ಜಿ‌ಎಮ್ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆದ ರಾಜ್ಯಮಟ್ಟದ ಹೊನಲು ಬೆಳಕಿನ ಕ್ರೀಡಾಕೂಟದ ಸಮಾರೋಪ ಸಮಾರಂಭಲ್ಲಿ ಅವರು ಮಾತನಾಡಿದರು.

ಭಾನುವಾರ ಸಂಜೆ ನಡೆದ ಸಮಾರೋಪದಲ್ಲಿ ಮಾತನಾಡಿದ ಅವರು, ಉಡುಪಿ ವಕೀಲರ ಸಂಘವು ನಿತ್ಯದ ಕಾರ್ಯಗಳೊಂದಿಗೆ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಿಭಾಯಿಸಿದೆ. ವಕೀಲರ ಬೇಡಿಕೆಗಳಿಗೆ ಕೊನೆ ಇರುವುದಿಲ್ಲ, ಕ್ರೀಡೆ ಹಾಗೂ ನ್ಯಾಯಾಂಗ ವ್ಯವಸ್ಥೆಯಲ್ಲಿ ತುಡಿತ ಇದ್ದಾಗ ಹೊಸ ವಿಚಾರಗಳು ಹೊರಗೆ ಬರುತ್ತವೆ. ಅಂತಹ ಮನಸ್ಸುಗಳಿಂದ ಬದಲಾವಣೆಗಳನ್ನು ತರಲು ಸಾಧ್ಯವಿದೆ ಎಂದರು.

ಸಾಮಾನ್ಯವಾಗಿ ಹುದ್ದೆಯಿಂದ ವ್ಯಕ್ತಿಗೆ ಗೌರವ ದೊರಕುತ್ತದೆ. ಆದರೆ ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಕೈಗೊಂಡ ಕಾರ್ಯಗಳಿಂದ ಅವರ ವರ್ಚಸ್ಸು ಹೆಚ್ಚುತ್ತಿದೆ. ಸೂರ್ಯನನ್ನು ಧರೆಗಿಳಿಸುವ ಸಾಮರ್ಥ್ಯ ಅವರಲ್ಲಿದೆ. ಅವರ ನಾಯಕತ್ವದ ತಂಡವು ಕ್ರೀಡಾಕೂಟವನ್ನು ಅದ್ಬುತವಾಗಿ ಸಂಘಟಿಸುವಲ್ಲಿ ಯಶಸ್ವಿಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಅನೇಕ ಕಡೆಗಳಲ್ಲಿ ಹಿರಿಯ ವಕೀಲರು ಗ್ರಂಥಾಲಯ, ಮತ್ತೆ ಕೆಲವರು ಕ್ರೀಡಾಂಗಣದಲ್ಲಿ ಸಮಯ ಕಳೆಯುತ್ತಾರೆ. ವೈದ್ಯರು, ಅಭಿಯಂತರರು ಪ್ರತಿದಿನ ದೈಹಿಕ ಚಟುವಟಿಕೆಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಾರೆ. ಧೂಳು, ಬಿಸಿಲಿನಲ್ಲಿ ಆಟ ಆಡುವುದು ಒಂದು ದಿನದಲ್ಲಿ ಸಾಧ್ಯವಿಲ್ಲ. ಇದಕ್ಕೆ ದೈಹಿಕ ಹಾಗು ಮಾನಸಿಕ ತಯಾರಿ ಅಗತ್ಯ ಎಂದು ಅಭಿಪ್ರಾಯಪಟ್ಟರು.

ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಹೆಚ್.ವಿ ರಾಘವೇಂದ್ರ ಮಾತನಾಡಿ, ಕರಾವಳಿ ಭಾಗದಲ್ಲಿ ಹೈಕೋರ್ಟಿನ ವಿಭಾಗೀಯ ಪೀಠವನ್ನು ಸ್ಥಾಪಿಸಬೇಕೆಂಬ ಬೇಡಿಕೆಗೆ ಉಡುಪಿ ವಕೀಲರ ಸಂಘದ ಸಹಕಾರ ನೀಡಬೇಕು. ಮುಂದಿನ ದಿನಗಳಲ್ಲಿ ಈ ಬೇಡಿಕೆಯೂ ಹೋರಾಟ ಸ್ವರೂಪ ಪಡೆದುಕೊಳ್ಳಲಿದ್ದು, ಇದಕ್ಕೆ ಉಡುಪಿ ನ್ಯಾಯವಾದಿಗಳು ಹಾಗೂ ಸಂಘದ ಬೆಂಬಲವನ್ನು ಯಾಚಿಸಿದರು.

ಪೋಕ್ಸೋ ವಿಶೇಷ ನ್ಯಾಯಾಲಯದ ಹೆಚ್ಚುವರಿ ಮತ್ತು ಸತ್ರ ನ್ಯಾಯಧೀಶ ಶ್ರೀನಿವಾಸ್ ಸುವರ್ಣ, ಹಿರಿಯ ನ್ಯಾಯವಾದಿ ಎಮ್.ಶಾಂತಾರಾಮ್ ಶೆಟ್ಟಿ, ಎಮ್‌ಐಟಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಸತೀಶ್ ಮಲ್ಯ, ಉಡುಪಿ ವಕೀಲರ ಸಂಘದ ಉಪಾಧ್ಯಕ್ಷ, ಕ್ರೀಡಾಕೂಟದ ಸಂಚಾಲಕ ಮಿತ್ರ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಇಂಚರಾ ಶಿವಪುರ ಪ್ರಾರ್ಥಿಸಿದರು. ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಸ್ವಾಗತಿಸಿದರು. ಕಾರ್ಯದರ್ಶಿ ರಾಜೇಶ್ ಎ.ಆರ್ ವಂದಿಸಿದರು. ನ್ಯಾಯವಾದಿ ಸಹನಾ ಕುಂದರ್ ನಿರೂಪಿಸಿದರು.

 

 

LEAVE A REPLY

Please enter your comment!
Please enter your name here