
ಬೆಳ್ತಂಗಡಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರು 2ನೇ ಅವಧಿಯ ಕೊನೆಯ ಮಧ್ಯಂತರ ಬಜೆಟ್ ಅನ್ನು ನರೇಂದ್ರ ಮೋದಿ ನೇತೃತ್ವದಲ್ಲಿ ಮಂಡಿಸಿದ್ದು, ಇದು ವಿಕಸಿತ ಭಾರತ 2047ರ ಮುಂಗಡ ಪತ್ರವೆಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸಂತಸ ವ್ಯಕ್ತ ಪಡಿಸಿದ್ದಾರೆ.
ವಿಕಸಿತ ಭಾರತದ ದೂರದೃಷ್ಟಿಯಲ್ಲಿಟ್ಟುಕೊಂಡು ಮಂಡಿಸಿದ ಬಜೆಟ್ ಇದಾಗಿದ್ದು, 3 ಕೋಟಿ ಮನೆಗಳ ಗುರಿ, ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿ 55 ಲಕ್ಷ ಉದ್ಯೋಗ ಸೃಷ್ಟಿ, ರೈಲು ಇಲಾಖೆಯಲ್ಲಿ ವಂದೇ ಭಾರತ್ ಯೋಜನೆಗೆ ಉತ್ತೇಜನ, ರಸ್ತೆ, ರೈಲು ವಿಮಾನಯಾನಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಮೀಸಲು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಆಯುಷ್ಮಾನ್ ಯೋಜನೆ ವಿಸ್ತರಣೆ, ಪ್ರವಾಸೋದ್ಯಮ ಹಾಗೂ ಕೃಷಿಗೆ ವೈಜ್ಞಾನಿಕ ಸ್ಪರ್ಶ ನಿಶ್ಚಿತವಾಗಿಯೂ ಸರ್ವಾಂಗೀಣ ಪ್ರಗತಿಯತ್ತ ದೇಶ ಮುನ್ನಡೆಯಲಿದೆ.
ದೇಶದ 1 ಕೋಟಿ ಮನೆಗಳ ಮಾಳಿಗೆ ಮೇಲೆ ಸೋಲಾರ್ ಅಳವಡಿಕೆ ಯೋಜನೆಯಿಂದ ಮುಂದಿನ ದಿನಗಳಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ರಾಷ್ಟ್ರ ಸ್ವಾವಲಂಬಿಯಾಗುವುದು ಮಾತ್ರವಲ್ಲದೆ, ಹೆಚ್ಚುವರಿ ವಿದ್ಯುತ್ನ್ನು ಮಾರಾಟ ಮಾಡುವ ಅವಕಾಶದಿಂದ ಜನತೆಯಲ್ಲಿ ಜೀವನ ಮಟ್ಟ ಹಾಗೂ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
