
ದೆಹಲಿ: ಟೆಂಡರ್ ಅವಧಿ ಮುಗಿದಿದ್ದರೂ ಉಡುಪಿ ಜಿಲ್ಲೆಯ ಸಂತೆಕಟ್ಟೆ ಕಲ್ಯಾಣಪುರದ ಸುರಂಗ ಮಾರ್ಗ ಹಾಗೂ ಇಂದ್ರಾಳಿಯ ಮೇಲ್ಸೇತುವೆ, ಮಲ್ಪೆ ಭೂಸ್ವಾಧೀನದ ವಿಳಂಬ ಮತ್ತು ನೆನೆಗುದ್ದಿಗೆ ಬಿದ್ದಿರುವ ತನಿಕೋಡು ಗೇಟ್ನಿಂದ ಎಸ್.ಕೆ.ಬಾರ್ಡರ್ ವರೆಗಿನ ರಾಷ್ಟ್ರೀಯ ಹೆದ್ದಾರಿಯ ಸಮಸ್ಯೆಗಳನ್ನು ತುರ್ತು ಪರಿಹರಿಸಬೇಕೆಂದು ಉಡುಪಿ ಚಿಕ್ಕಮಗಳೂರು ನೂತನ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿಯವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಸಚಿವ ಗಡ್ಕರಿ ಸಂಬಂಧಿಸಿದ ಅಧಿಕಾರಿಗಳಿಗೆ ತುರ್ತು ಆದೇಶ ನೀಡಿ ಕಾಮಗಾರಿಗಳನ್ನು ವಿಳಂಬವಿಲ್ಲದೆ ಅತಿ ಶೀಘ್ರದಲ್ಲಿ ಮುಗಿಸುವಂತೆ ಆದೇಶ ನೀಡಿದ್ದಾರೆ.
ಡಿಸೆಂಬರ್ ಒಳಗೆ ತಾನೇ ಎಲ್ಲಾ ಕಾಮಗಾರಿಗಳನ್ನು ಉದ್ಘಾಟಿಸುವುದಾಗಿ ಕೇಂದ್ರ ಸಚಿವರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಭರವಸೆ ನೀಡಿದರು.
ಈ ಸಂದರ್ಭ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ಜೊತೆಗೆ ಕೇಂದ್ರ ಸಚಿವ ವಿ.ಸೋಮಣ್ಣ ಸಂಸದ ಬಿ ವೈ ರಾಘವೇಂದ್ರ, ಕಾರ್ಕಳ ಶಾಸಕ ಸುನಿಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
