
ಬೆಂಗಳೂರು:ʼ ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿ ನೀಡಿರುವ ಗ್ಯಾರಂಟಿ ಯೋಜನೆಗಳನ್ನ ಕಾರ್ಯಗತ ತರುವಲ್ಲಿ ನಿರತವಾಗಿದೆ. ಭರವಸೆ ನೀಡಿದಷ್ಟು ಸುಲಭವಾಗಿ ಅದನ್ನು ಅನುಷ್ಟಾನಗೊಳಿಸುವುದು ಸಾಧ್ಯವಿಲ್ಲ. ಆದರೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗದಂತೆ ನೋಡಿಕೊಳ್ಳುವ ಸಲುವಾಗಿ ಎಲ್ಲಾ ಯೋಜನೆಗಳು ಜಾರಿಗೆ ತರಲೇಬೇಕಾಗಿದೆ. ಈ ಹಿನ್ನೆಲೆ ಸರ್ಕಾರಕ್ಕೆ ಬಿಸಿ ತುಪ್ಪವನ್ನು ಬಾಯಿಯಲ್ಲಿ ಇಟ್ಟುಕೊಂಡಂತಾಗದೆ. ಈ ಕಾರಣಕ್ಕೆ ಯೋಜನೆ ಸೌಲಭ್ಯ ಪಡೆಯುವಲ್ಲಿ ಕೆಲವೊಂದು ಮಾರ್ಗಸೂಚಿಯನ್ನು ಪ್ರಕಟಸುತ್ತಿದೆ. ದಿನಕ್ಕೊಂದು ಹೊಸ ರೂಲ್ಸ್ ಅನ್ನು ಮಾಡುತ್ತಿದೆ.
ಹೌದು, ಗೃಹಲಕ್ಷ್ಮೀ ಯೋಜನೆ ಮಾರ್ಗಸೂಚಿ ಪ್ರಕಟಿಸಿದಾಗ ಜಿಎಸ್ಟಿ ರಿಟನ್ಸ್ ಮಾಡುವವರ ಹಾಗೂ ಆದಾಯ ತೆರಿಗೆ ಪಾವತಿದಾರರ ಹೆಂಡತಿಯರಿಗೆ 2000 ರೂ ದೊರಕುವುದಿಲ್ಲ ಎಂದು ಹೇಳಲಾಗಿತ್ತು. ಆದರೆ, ಇದೀಗ ಮತ್ತೊಂದು ರೂಲ್ಸ್ ಹೊರಡಿಸಿದ್ದು, ಜಿಎಸ್ಟಿ ರಿಟನ್ಸ್ ಮಾಡುವವರ ತಾಯಿಗೂ ಕೂಡ ಈ ಸೌಲಭ್ಯ ಲಭ್ಯವಾಗುವುದಿಲ್ಲ ಎನ್ನಲಾಗಿದೆ. ಇದರೊಂದಿಗೆ ಸರ್ಕಾರಿ ನೌಕರರ ಕುಟುಂಬಕ್ಕೂ ಕೂಡ ಗೃಹಲಕ್ಷ್ಮೀ ಯೋಜನೆ ಅನ್ವಯವಾಗುವುದಿಲ್ಲ ಎಂದು ಹೊಸ ರೂಲ್ಸ್ ನಲ್ಲಿ ತಿಳಿಸಲಾಗಿದೆ. ಆ ಮೂಲಕ ದಿನಕ್ಕೊಂದು ರೂಲ್ಸ್ ಜಾರಿಗೆ ತರುವ ಮೂಲಕ ಯೋಜನೆ ಎಲ್ಲರ ಕೈಗೆಟುಕದಂತೆ ಮಾಡುತ್ತಿದ್ದಾರೆ. ಇವರ ಈ ನಡವಳಿಕೆ ವಿರೋಧ ಪಕ್ಷಕ್ಕೆ ದಾಳವಾಗಿ ಪರಿಣಮಿಸಿದ್ದು, ಯೋಜನೆ ಘೋಷಿಸಿದಷ್ಟು ಸುಲಭವಾಗಿ ಜಾರಿಗೆ ತರಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡುತ್ತಿದ್ದಾರೆ.
