
ಮಂಗಳೂರು: ಡಿ.10ರಿಂದ 15ರವರೆಗೆ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾಗುವ ‘ಆಳ್ವಾಸ್ ವಿರಾಸತ್ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಪುತ್ತಿಗೆ ವಿವೇಕಾನಂದ ನಗರದ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗ ಮಂದಿರದಲ್ಲಿ ನಡೆಯಲಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, 30ನೇ ವರ್ಷದ ಆಳ್ವಾಸ್ ವಿರಾಸತ್ ನಲ್ಲಿ ವಿಶೇಷ ಆಕರ್ಷಣೆಯಾಗಿ, ಕೈಮಗ್ಗ ಸೀರೆಗಳ ಉತ್ಸವವನ್ನು ಆಯೋಜಿಸಲಾಗಿದೆ. ಭಾರತದ 30 ಪ್ರದೇಶವಾರು ಹಾಗೂ ಜಿಐ ಟ್ಯಾಗ್ ಹೊಂದಿರುವ ಕೈಮಗ್ಗ ಸೀರೆಗಳ ಹಾಗೂ ಬಟ್ಟೆಗಳ ಉತ್ಸವ ವಿರಾಸತ್ ನಲ್ಲಿ ಇರಲಿದೆ ಎಂದರು.
ಭಾರತೀಯ ಪರಂಪರೆಯನ್ನು ಬಿಂಬಿಸುವ ಕಾಶ್ಮೀರದಿಂದ ಕನ್ಯಾಕುಮಾರರಿರೆಗಿನ ನೇಕಾರರಿಂದ ಗ್ರಾಹಕರಿಗೆ ನೇರ ಮಾರಾಟವೂ ನಡೆಯಲಿದೆ. ಉಡುಪಿ, ಇಳಕಲ್ ಕೋಲ್ಕತ್ತಾ ತುಮ್ಮಿನಕಟ್ಟೆ ವೆಂಕಟಗಿರಿ, ಕಾಶ್ಮೀರಿ, ಕಾಂಚೀವರಂ, ಮೈಸೂರು, ಕೊಳ್ಳೇಗಾಲ, ದಾವಣಗೆರೆ, ಚೆಟ್ಟಿನಾಡ್ ಕೇರಳ, ಹೈದರಾಬಾದ್ ಮದ್ರಾಸ್ ನ ಸೀರೆಗಳು ಮತ್ತು ಬಟ್ಟೆಗಳು ಈ ಮೇಳದಲ್ಲಿರಲಿವೆ.
ಉಡುಪಿಯ ಪದ್ಮಶಾಲಿ ನೇಕಾರರ ಪ್ರತಿಷ್ಠಾನದ ಸಹಕಾರದೊಂದಿಗೆ ಈ ಉತ್ಸವ ಆಯೋಜಿಸಲಾಗಿದೆ ಎಂದು ಅವರು ವಿವರಿಸಿದರು.
2024ನೇ ಸಾಲಿನ ಆಳ್ವಾಸ್ ವಿರಾಸತ್ ಪ್ರಶಸ್ತಿಯನ್ನು ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪಂಡಿತ್ ವೆಂಕಟೇಶ್ ಕುಮಾರ್ ರಿಗೆ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ಮೊದಲನೇ ದಿನ: ಡಿ.10ರ ಸಂಜೆ 5:30ರಿಂದ 6:30ರವರೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಉದ್ಘಾಟನೆ ನೆರವೇರಿಸುವರು ಉಡುಪಿ ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷ ಜಿ. ಶಂಕರ್ ಅಧ್ಯಕ್ಷತೆ ವಹಿಸುವರು ಎಂದರು.
ಸಂಜೆ 6:35ರಿಂದ 8:30ರವರೆಗೆ 100ಕ್ಕೂ ಅಧಿಕ ದೇಶಿಯ ಜಾನಪದ ಕಲಾ ತಂಡಗಳಿಂದ ಕೂಡಿದ 3000ಕ್ಕೂ ಅಧಿಕ ಕಲಾವಿದರನ್ನು ಒಳಗೊಂಡ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ ರಾತ್ರಿ 8:30ರಿಂದ 9:30ರವರೆಗೆ ಆಳ್ವಾಸ್ ವಿರಾಸತ್ ಸಾಂಸ್ಕೃತಿಕ ರಥ ಸಂಚಲನ ಹಾಗೂ ರಧಾರತಿ ನಡೆಯಲಿದೆ.
ಎರಡನೇ ದಿನ: ಡಿ.11ರಂದು ಸಂಜೆ 5:45ರಿಂದ 6:30ರವರೆಗೆ ಅಳ್ವಾಸ್ ವಿರಾಸತ್ 2024 ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, 6:35ರಿಂದ 7:30ರವರೆಗೆ ಹಿಂದೂಸ್ಥಾನಿ ಗಾಯನ, ಬಳಿಕ 7.45ರಿಂದ 9ರವರೆಗೆ ಗುಜರಾತ್ ನ ರಂಗ್ ಮಲಹರ್ ದಿ. ಪೋಕ್ ಆರ್ಟ್ಸ್ ತಂಡದಿಂದ ಗುಜರಾತಿ ಜಾನಪದ ನೃತ್ಯ ಪ್ರದರ್ಶನ ನಡೆಯಲಿದೆ. 9 ಗಂಟೆಯಿಂದ ಆಳ್ವಾಸ್ ವೈವಿಧ್ಯಮಯ ಸಾಂಸ್ಕೃತಿಕ ವೈಭವ ನಡೆಯಲಿದೆ.
ಮೂರನೇ ದಿನ: ಡಿ.12ರಂದು ಸಂಜೆ 6ರಿಂದ 8ರವರೆಗೆ ಗುಜರಾತ್ ನ ಒಸ್ಥಾನ್ ಮೀರ್ ಮತ್ತು ಬಳಗದಿಂದ ಸಂಗೀತ ಲಹರಿ ಹಾಗೂ ರಾತ್ರಿ 8.15ರಿಂದ ನೃತ್ಯ ವೈವಿಧ್ಯ, ರಾತ್ರಿ 9:15ರಿಂದ ಆಳ್ವಾಸ್ ವೈವಿಧ್ಯಮಯ ಸಾಂಸ್ಕೃತಿಕ ವೈಭವ ಪ್ರಸ್ತುತಗೊಳ್ಳಲಿದೆ.
ನಾಲ್ಕನೇ ದಿನ: ಡಿ.13ರಂದು ಸಂಜೆ 6ರಿಂದ 8ರವರೆಗೆ ನೀಲಾದ್ರಿ ಕುಮಾರ್ ಮತ್ತು ತಂಡದಿಂದ ‘ಸೌಂಡ್ ಆಫ್ ಇಂಡಿಯಾ’ ಹಾಗೂ 8.15ರಿಂದ 9ರವರೆಗೆ ಕೋಲ್ಕತ್ತಾದ ಆಶೀಮ್ ಬಂಧು ಭಟ್ಟಾಚಾರ್ಜಿ ಸಂಯೋಜನೆಯಲ್ಲಿ ಭರತನಾಟ್ಯ ಒಡಿಸ್ವಿ, ಕಥಕ್ ಸಂಗಮದ ತ್ರಿಪರ್ಣ ಪ್ರಸ್ತುತಗೊಳ್ಳಲಿದೆ.
ರಾತ್ರಿ 9ರಿಂದ ಬೆಂಗಳೂರು ಕಾರ್ತೀಸ್ ರ್ಫಫಾರ್ಮಿಂಗ್ ಆರ್ಟ್ಸ್ ನೃತ್ಯೋಲ್ಲಾಸ ಹಾಗೂ ಬೆಂಗಳೂರು ರಾಜರಾಜೇಶ್ವರಿ ಕಲಾನಿಕೇತನದಿಂದ ಕೂಚುಪುಡಿ ನೃತ್ಯ ಹಾಗೂ 9:15ರಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ಪ್ರದರ್ಶನಗೊಳ್ಳಲಿದೆ.
ಐದನೇ ದಿನ: ಡಿ.14ರಂದು ಸಂಜೆ 6ರಿಂದ 9ರವರೆಗೆ ಚೆನ್ನೈನ ಸ್ಪೆಕೇಟೋದ 25 ಕಲಾವಿದರಿಂದ ಸಂಗೀತ ರಸದೌತಣ ಹಾಗೂ ರಾತ್ರಿ 9ಕ್ಕೆ ಸಾಂಸ್ಕೃತಿಕ ರಥ ಸ್ವಸ್ಥಾನ ಗಮನದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತೆರೆ ಬೀಳಲಿದೆ.
ಆರನೇ ದಿನ: ಡಿ.15ರಂದು ಕೃಷಿ ಆಹಾರ, ಫಲಪುಷ್ಪ ಕರಕುಶಲ ಮತ್ತು ಪ್ರಾಚ್ಯವಸ್ತು ಪ್ರದರ್ಶನ, ಚಿತ್ರಕಲೆ, ಕಲಾಕೃತಿ, ಛಾಯಾಚಿತ್ರಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳ ಮೇಳ ದಿನಪೂರ್ತಿ ತೆರೆದಿರುತ್ತದೆ.
ಪ್ರತಿನಿತ್ಯ ಅಂದಾಜು ತಲಾ 1 ಲಕ್ಷ ಜನ ಸೇರುವ ನಿರೀಕ್ಷೆ ಇದ್ದು, ಅಗತ್ಯ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಡಾ.ಎಂ.ಮೋಹನ್ ಆಳ್ವ ತಿಳಿಸಿದರು.
ಈ ಹಿಂದಿನಂತೆಯೇ ಈ ಬಾರಿಯ ವಿರಾಸತ್ ನಲ್ಲೂ ಕೃಷಿ, ಆಹಾರ, ಫಲಪುಷ್ಪ ಸೇರಿದಂತೆ ವಿವಿಧ ಮೇಳಗಳು ಇರಲಿವೆ. ಕಲೆ ಮತ್ತು ಕರಕುಶಲ ವಸ್ತುಗಳು, ಉಡುಪುಗಳು, ಆಭರಣಗಳು, ಗೃಹಾಲಂಕಾರಿಕ ವಸ್ತುಗಳು, ಅಪರೂಪದ ಹಾಗೂ ಸಮಕಾಲೀನ ವಸ್ತುಗಳ ಬಜಾರ್ ಈ ಬಾರಿಯ ವಿರಾಸತ್ ನಲ್ಲಿರಲಿದೆ.
