
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಕ್ಕೊಳಪಟ್ಟ ಅಭಯ ಆಂಜನೇಯ ದೇವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಧಾರವಾಡ ಮೂಲದ ವೀರಣ್ಣ ಗೌಡ (26) ಎಂದು ಗುರುತಿಸಲಾಗಿದೆ.
ನ. 3ರಂದು ರಾತ್ರಿ ಅಭಯ ಆಂಜನೇಯ ದೇವಸ್ಥಾನದಿಂದ ಪೂಜಾ ಸೊತ್ತುಗಳು ಹಾಗೂ ಸಿಸಿ ಕೆಮರಾದ ಸೊತ್ತುಗಳ ಕಳ್ಳತನ ನಡೆದಿತ್ತು.
ಈ ಬಗ್ಗೆ ದೇವಳದ ಕಾರ್ಯನಿರ್ವಹಣಾಧಿಕಾರಿ ಅವರು ಸುಬ್ರಹ್ಮಣ್ಯ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಸುಬ್ರಹ್ಮಣ್ಯ ಪೊಲೀಸರು ತನಿಖೆ ನಡೆಸಿ ಸಿಸಿ ಕೆಮರಾದ ದೃಶ್ಯಗಳನ್ನು ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ದೇಗುಲದ ಪಾರ್ಕಿಂಗ್ ಜಾಗದಲ್ಲಿ ಸುತ್ತಾಡುತ್ತಿದ್ದ ಆರೋಪಿಯನ್ನು ಸುಬ್ರಹ್ಮಣ್ಯ ಪೊಲೀಸರು ಪತ್ತೆ ಹಚ್ಚಿ, ವಿಚಾರಣೆ ನಡೆಸಿ, ಕಳವು ನಡೆಸಿದ ಸೊತ್ತುಗಳನ್ನು ಬೇರೊಂದು ಕಡೆ ಮೂಟೆ ಕಟ್ಟಿ ಇರಿಸಲಾಗಿದ್ದಲ್ಲಿಂದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
