
ಬೆಂಗಳೂರು: ಮುಡಾ ಹಗರಣದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅರ್ಕಾವತಿ ಲೇಔಟ್ ನಿವೇಶನದಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ಏನಿದು ಅರ್ಕಾವತಿ ಲೇಔಟ್ ವಿವಾದ: ಥಣಿಸಂದ್ರ, ಸಂಪಿಗೆಹಳ್ಳಿ, ಜಕ್ಕೂರು, ಕೆ.ನಾರಾಯಣಪುರ ಸೇರಿ 16 ಹಳ್ಳಿಗಳ ಸುಮಾರು 800 ಎಕರೆ ಜಮೀನನ್ನು ರೈತರಿಂದ ಖರೀದಿಸಿ, ಬಿಡಿಎ ನಿವೇಶನಗಳಾಗಿ ಪರಿವರ್ತನೆ ಮಾಡಿದೆ.
2004ರಲ್ಲಿ ಬಿಡಿಎ ಅರ್ಕಾವತಿ ಲೇಔಟ್ನಲ್ಲಿನ ನಿವೇಶನಕ್ಕೆ ಅರ್ಜಿ ಆಹ್ವಾನಿಸಿತ್ತು. ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನರು ನಿವೇಶನಕ್ಕಾಗಿ ಅರ್ಜಿ ಹಾಕಿದ್ದರು. 2006 ರಲ್ಲಿ ಬಿಡಿಎ 20 ಸಾವಿರ ಜನರನ್ನು ಫಲಾನುಭವಿಗಳಾಗಿ ಮತ್ತು 12 ಸಾವಿರ ಜನರನ್ನು ನಿವೇಶನ ಕೊಂಡುಕೊಳ್ಳುವುವವರಾಗಿ ಪರಿಗಣಿಸಿತ್ತು.
ರೈತರಿಗೆ ಪರಿಹಾರ ನೀಡಿ ಬಿಡಿಎ ಕೈತೊಳೆದುಕೊಂಡಿತು. ಮತ್ತು 30X40 ನಿವೇಶನಕ್ಕೆ ಎರಡೂವರೆ ಲಕ್ಷ ರೂ. ಮತ್ತು 40X60 ನಿವೇಶನಕ್ಕೆ ನಾಲ್ಕೂವರೆ ಲಕ್ಷ ರೂ. ಅಂತೆ ಹಣ ಪಡೆದು ಬಿಡಿಎ 12 ಸಾವಿರ ಜನರಿಗೆ ನಿವೇಶನ ಹಂಚಿಕೆ ಮಾಡಿತ್ತು. ಹಾಗು ಇವರಿಗೆ ಬಿಡಿಎ ರಿಜಿಸ್ಟರ್ ಕಮ್ ಸೇಲ್ ಡೀಡ್ ನೀಡಿತ್ತು.
ರಿಜಿಸ್ಟರ್ ಕಮ್ ಸೇಲ್ ಡೀಡ್ ಆಗಿದ್ದರಿಂದ ನಿವೇಶನದಾರರು ನಿವೇಶನವನ್ನು ಕನಿಷ್ಠ ಹತ್ತು ವರ್ಷ ಮಾರಾಟ ಮಾಡುವಂತಿಲ್ಲ. ನಿವೇಶನದಾರರು 2006ರಿಂದ ಈವರೆಗೂ ನಿವೇಶನ ಸಂಬಂಧ ತೆರಿಗೆ ಕಟ್ಟುತ್ತಿದ್ದಾರೆ. ಆದರೆ 2014ರಲ್ಲಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅರ್ಕಾವತಿ ನಿವೇಶನಗಳ ಹಿಂಪಡೆಯಿತು.
ಇದರಿಂದ ನಿವೇಶನದಾರರಿಗೆ ತಮ್ಮ ನಿವೇಶನಕ್ಕೆ ಹೋಗಲು ಬಿಡುತ್ತಿಲ್ಲ. ಇತ್ತ ವಶಪಡಿಸಿಕೊಂಡ ಜಮೀನು ರೈತರಿಗೂ ಹಿಂದುರುಗಿಸಿಲ್ಲ.
ಇವೆಲ್ಲವನ್ನು ಗಮನಿಸಿದರೇ ಅರ್ಕಾವತಿ ಲೇಔಟ್ನಲ್ಲಿ ಅಕ್ರಮ ಎಸಗಲಾಗಿದೆ. ಅರ್ಕಾವತಿ ಲೇಔಟ್ನಲ್ಲಿ ವಶಪಡಿಸಿಕೊಂಡಿರುವ ಜಾಗ ಭೂಗಳ್ಳರ ಪಾಲಾಗುತ್ತಿದೆ ಎಂದು ಅರ್ಕಾವತಿ ಲೇಔಟ್ನಲ್ಲಿ ನಿವೇಶನ ಪಡೆದಿದ್ದ ಶಿವಲಿಂಗಪ್ಪ, ವೆಂಕಟಕೃಷ್ಣಪ್ಪ, ರಾಮಚಂದ್ರಯ್ಯ ರಾಜಶೇಖರ್ ಎಂಬುವರು ಸಿಎಂ ಸಿದ್ದರಾಮಯ್ಯ, ಬಿಡಿಎ ಆಯುಕ್ತ ಹಾಗೂ ಬಿಡಿಎ ಅಧಿಕಾರಿಗಳ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
