
ಉಡುಪಿ: ಕುಂಭಮೇಳದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕುಂಭಮೇಳದಲ್ಲಿ ಸ್ನಾನ ಮಾಡುವುದರಿಂದ ದೇಶದಲ್ಲಿ ಬಡತನ ಹೋಗುವುದಿಲ್ಲ. ಮೋದಿ ಮತ್ತು ಅಮಿತ್ ಶಾ ನೂರು ಬಾರಿ ಸ್ನಾನ ಮಾಡಿದರೂ ಸ್ವರ್ಗಕ್ಕೆ ಹೋಗುವುದಿಲ್ಲ ಎಂದು ಹೇಳಿಕೆ ನೀಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಹಿಂದೂ ಧರ್ಮವನ್ನು ಅರ್ಥ ಮಾಡಿಕೊಳ್ಳದವರು ಸ್ವರ್ಗ-ನರಕದ ಬಗ್ಗೆ ಮಾತನಾಡುತ್ತಿದ್ದಾರೆ. ಹಿಂದೂ ಧರ್ಮದ ಆಚಾರ-ವಿಚಾರಗಳನ್ನು ತಿಳಿಯದ ನಿಮಗೆ ಸ್ವರ್ಗದ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ ಎಂದು ಯಶ್ಪಾಲ್ ಸುವರ್ಣ ಹೇಳಿದ್ದಾರೆ.
ಇಂತಹ ಹೇಳಿಕೆಗಳು ರಾಷ್ಟ್ರೀಯ ನಾಯಕನ ಸ್ಥಾನಮಾನಕ್ಕೆ ಹೊಂದುವುದಿಲ್ಲ. ಖರ್ಗೆಯವರ ಹೇಳಿಕೆಗಳು ವಯಸ್ಸಿಗೆ ಸಂಬಂಧಿಸಿದ ಲೋಪದೋಷವೋ ಅಥವಾ ಪಕ್ಷ ಚಾಲಿತ ವಾಕ್ಚಾತುರ್ಯವೋ ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಹೇಳಿದರು.
ಪ್ರಪಂಚದಾದ್ಯಂತ ಅನೇಕ ಜನರು ಮಹಾ ಕುಂಭಮೇಳದಲ್ಲಿ ಭಾಗವಹಿಸಲು ಬಯಸುತ್ತಾರೆ. ಖರ್ಗೆ ಅವರು ವಿಶ್ವದಾದ್ಯಂತ ಜನರನ್ನು ನಾಚಿಕೆಪಡಿಸುವ ಹೇಳಿಕೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
