
ಮಂಗಳೂರು: ಮಂಗಳೂರಿನಿಂದ ಸಿಂಗಾಪುರ ನಡುವಣ ನೇರ ವಿಮಾನ ಹಾರಾಟಕ್ಕೆ ಏರ್ ಇಂಡಿಯ ಎಕ್ಸ್ಪ್ರೆಸ್ ವಿಮಾನಯಾನ ಸಂಸ್ಥೆ ಮುಂದಾಗಿದೆ.
ಜ.21 ರಿಂದ ವಾರದಲ್ಲಿ ಎರಡು ದಿನಗಳ ಕಾಲ ಈ ವಿಮಾನ ಕಾರ್ಯಚರಣೆ ನಡೆಸಲಿದೆ.
ಈ ಕುರಿತು ಸಂಸದ ಕ್ಯಾ| ಬ್ರಿಜೇಶ್ ಚೌಟ ಅವರು ಟ್ವೀಟ್ ಮಾಡಿ ಸಿಂಗಾಪುದಲ್ಲಿ ನೆಲೆಸಿರುವ ಮಂಗಳೂರಿಗರಿಗೆ ತಮ್ಮ ಊರುಗಳಿಗೆ ಬರಲು ಮತ್ತು ಮಂಗಳೂರಿನಲ್ಲಿ ಹೂಡಿಕೆಗೆ ಈ ಸೌಕರ್ಯ ನೆರವಾಗಲಿದೆ ಎಂದಿದ್ದಾರೆ.
ಮಂಗಳೂರಿನಿಂದ ಸಿಂಗಾಪುರಕ್ಕೆ ನೇರ ವಿಮಾನ ಸೇವೆ ಬೇಕೆಂಬ ಬೇಡಿಕೆ ಇತ್ತು. ಈ ಕುರಿತಂತೆ ನಾಗರಿಕ ವಿಮಾನಯಾನ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದೆ. ಇದೀಗ ನೇರ ವಿಮಾನ ಸಂಪರ್ಕಕ್ಕೆ ಒಪ್ಪಿಗೆ ದೊರೆತಿದೆ ಎಂದು ತಿಳಿಸಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಿಂದ ಸಿಂಗಾಪುರಕ್ಕೆ ವಿಮಾನ ಯಾನ ಆರಂಭಿಸುವುದರೊಂದಿಗೆ ಆಗ್ನೇಯ ಏಷ್ಯಾದ ಮೊದಲ ಅಂತಾರಾಷ್ಟ್ರೀಯ ತಾಣಕ್ಕೆ ವಿಮಾನ ಸಂಪರ್ಕ ಕಲ್ಪಿಸಿದಂತಾಗಿದೆ.
ಅದೇ ರೀತಿ ಮಂಗಳೂರು-ಹೊಸದಿಲ್ಲಿ, ಮಂಗಳೂರು – ಪುಣೆ ನಡುವೆಯೂ ನೇರ ವಿಮಾನ ಹಾರಾಡಲಿದೆ.
