
ಉಡುಪಿ: ಕಾರ್ಕಳ ಶಾಸಕ ಸುನಿಲ್ ಕುಮಾರ್ ಧರ್ಮವನ್ನು ಎದುರು ತಂದು ಜನರಿಗೆ ಮೋಸ ಮಾಡುತ್ತಿದ್ದಾರೆ. ಜಗತ್ತಿನಲ್ಲೇ ಇಷ್ಟೊಂದು ಧರ್ಮಕ್ಕೆ ಅಪಪ್ರಚಾರ ಮಾಡಿದವರು ಯಾರು ಇಲ್ಲ. ಇವರನ್ನು ಧಾರ್ಮಿಕ ಕೇಂದ್ರದಿಂದ ಬಹಿಷ್ಕಾರ ಹಾಕಬೇಕು ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ಹೇಳಿದರು.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುನಿಲ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
ಒಂದು ಕಾಲು ಕೋಟಿಯಲ್ಲಿ ಕಂಚಿನ ಮೂರ್ತಿ ನಿರ್ಮಿಸಬೇಕಿತ್ತು. ಆದರೆ ಶಿಲ್ಪಿ ಕೃಷ್ಣ ನಾಯ್ಕ್ ಅನ್ಯ ವಸ್ತುವಿನಿಂದ ಮೂರ್ತಿ ನಿರ್ಮಿಸಿ ಇಡೀ ಜಗತ್ತಿಗೆ ಮೋಸ ಮಾಡಿದ್ದಾರೆ. ಹಾಗಾಗಿ ಇನ್ನುಮುಂದೆ ಅವರ ಮೂಲಕ ಮೂರ್ತಿಯ ಕೆಲಸ ಮುಂದುವರಿಸಬಾರದು ಎಂದರು.
ಶಿಲ್ಪಿ ಕೃಷ್ಣ ನಾಯ್ಕ್ ಅವರಿಂದ ಒಂದು ಕಾಲು ಕೋಟಿ ರೂ. ವಾಪಾಸು ಪಡೆದು, ರಾಜ್ಯದ ಪರಿಣಿತ ಶಿಲ್ಪಿಗಳಿಗೆ ಮೂರ್ತಿ ನಿರ್ಮಿಸಲು ಕೊಡಬೇಕು. ನೂರಾರು ವರ್ಷಗಳ ಕಾಲು ಶಾಶ್ವತವಾಗಿ ಉಳಿಯುವ ಮೂರ್ತಿ ನಿರ್ಮಾಣ ಮಾಡಬೇಕು ಎಂದರು.
ಬೈಲೂರಿನ ಉಮಿಕಲ್ ಬೆಟ್ಟವನ್ನು ಉತ್ತಮ ಪ್ರವಾಸೋದ್ಯಮ ಕ್ಷೇತ್ರವನ್ನಾಗಿ ನಿರ್ಮಾಣ ಮಾಡಬೇಕು ಎಂದು ಹೇಳಿದರು.
