ರಾಯಚೂರು: ಫೈನಾನ್ಸ್ ಸಾಲ ರಿಕವರಿ ಟೀಂ ಹೆಸರಲ್ಲಿ ಕಿರುಕುಳ ನೀಡುತ್ತಿದ್ದ ನಾಲ್ವರು ಆರೋಪಿಗಳನ್ನ ಪೊಲೀಸರು ಬಂಧಿಸಿದ ಘಟನೆ ರಾಯಚೂರಿನಲ್ಲಿ ನಡೆದಿದೆ.
ಬಂಧಿತ ಆರೋಪಿಗಳನ್ನು ಫಯಾಜ್, ಶೇಖ್ ಎಂಡಿ ಆಯುಬ್, ಸೈಯದ್ ಶಹಬಾಜ್ ಅಹ್ಮದ್, ಅರೋನ್ ರಸೀದ್ ಎಂದು ಗುರುತಿಸಲಾಗಿದೆ.
ಈ ತಂಡ ಮೊಬೈಲ್ ಆ್ಯಪ್ನಲ್ಲಿ ಫೈನಾನ್ಸ್ಗಳ ಸಾಲ ಬಾಕಿ ಇರುವವರನ್ನ ಗುರುತಿಸಿ, ಟಾರ್ಗೆಟ್ ಮಾಡುತ್ತಿದ್ದರು. ರಸ್ತೆ ಮಧ್ಯದಲ್ಲೇ ಬೈಕ್, ವಾಹನಗಳನ್ನ ಅಡ್ಡಗಟ್ಟಿ ಸಾಲ ತೀರಿಸುವಂತೆ ಬೆದರಿಕೆ ಹಾಕುತ್ತಿದ್ದರು.
ಯಾದಗಿರಿ ಜಿಲ್ಲೆ ಗುಂಡ್ಲೂರಿನ ಸೈಯದ್ ಬಾಷಾ ಎಂಬುವವರ ಬುಲೇರೋ ವಾಹನವನ್ನ ನಗರದ ಹೊರವಲಯದ ಬೈಪಾಸ್ ರಸ್ತೆಯಲ್ಲಿ ಹಿಡಿದು 12 ಸಾವಿರ ರೂ. ಬೇಡಿಕೆ ಇಟ್ಟು ವಾಹನ ಜಪ್ತಿ ಮಾಡಿದ್ದರು.
ಫೈನಾನ್ಸ್ ಕಂಪನಿಯಲ್ಲಿ ಸೈಯದ್ ಬಾಷಾ ಕಂತು ಕಟ್ಟಿ ಬಂದಿದ್ದರೂ ವಾಹನ ಬಿಟ್ಟಿರಲಿಲ್ಲ. ಫೈನಾನ್ಸ್ನಲ್ಲಿ ಕಟ್ಟಿದರೆ ಸಾಲಲ್ಲ, ನಮಗೂ ಹಣ ಕೊಡಬೇಕು ಎಂದು ಒತ್ತಾಯಿಸಿದ್ದರು. ಇದರಿಂದ ಅನುಮಾನದ ಮೇಲೆ ಸೈಯದ್ ಬಾಷಾ ಸಹೋದರ ಅಜೀಜ್ ರಾಯಚೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
