ಉಡುಪಿ: ಯುದ್ಧ ಪೀಡಿತ ಇಸ್ರೇಲ್ ನಲ್ಲಿ ಉಡುಪಿಯ ಹಲವಾರು ಮಂದಿ ಕೂಡ ಸಿಲುಕಿಹಾಕಿಕೊಂಡಿದ್ದು, ಅವರ ಕುಟುಂಬಸ್ಥರಿಗೆ ಆತಂಕ ಎದುರಾಗಿದೆ. ಕೇರ್ ಟೇಕರ್, ಹೋಂ ನರ್ಸ್ ಕೆಲಸಕ್ಕೆಂದು ಹೋಗಿದ್ದ ಜಿಲ್ಲೆಯ 30ಕ್ಕೂ ಅಧಿಕ ಮಂದಿ ಇಸ್ರೇಲ್ ನಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ, ಇಸ್ರೇಲ್ನಲ್ಲಿ ನಮ್ಮವರಿಗೆ ಸಮಸ್ಯೆಯಾಗಿರುವ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಸರ್ಕಾರದ ನಿದೇಶನದಂತೆ ಉಡುಪಿ ಜಿಲ್ಲಾಡಳಿತ ಕ್ರಮಕೈಗೊಳ್ಳುತ್ತದೆ. ಉಡುಪಿ ಜಿಲ್ಲಾಡಳಿತ ಬಳಿ ವಿಪತ್ತು ನಿರ್ವಹಣಾ ಕಂಟ್ರೋಲ್ ರೂಮ್ ಇದೆ. ಜಿಲ್ಲಾಡಳಿತ ಕಟ್ರೋಲ್ ರೂಮ್ ಸಿಬ್ಬಂದಿಗೆ ಸೂಚನೆ ಕೊಟ್ಟಿದೆ. ಈವರೆಗೆ ಜಿಲ್ಲೆಯಿಂದ ಯಾವುದೇ ಕಟುಂಬ ನಮ್ಮನ್ನು ಸಂಪರ್ಕ ಮಾಡಿಲ್ಲ ಎಂದಿದ್ದಾರೆ.
ಇನ್ನು, ಇಸ್ರೆಲ್ನಲ್ಲಿ ಸಂಬಂಧಪಟ್ಟ ಭಾರತೀಯ ಪ್ರಜೆಗಳಿದ್ದಲ್ಲಿ, ಅವರ ಬಗ್ಗೆ ಮಾಹಿತಿಯನ್ನು ರಜತಾದ್ರಿ ಮಣಿಪಾಲದಲ್ಲಿ ತೆರೆದಿರುವ ಕಂಟ್ರೋಲ್ ರೂಂ, ಸಂಖ್ಯೆ:1077/0820-2574802ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ. ಇಸ್ರೇಲ್ ನಲ್ಲಿ ಸಿಲುಕಿಕೊಂಡಿರುವ ಉಡುಪಿ ಮೂಲದವರ ಮಾಹಿತಿ ಸಂಗ್ರಹಿಸಿ ಜಿಲ್ಲಾಡಳಿತಕ್ಕೆ ರಾಜ್ಯ ಸರ್ಕಾರ ಒದಗಿಸಲಿದೆ.
