
ಮಂಗಳೂರು: ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ದರೋಡೆ ಪ್ರಕರಣದಲ್ಲಿ ಪೊಲೀಸರಿಗೆ ಮಹತ್ವದ ಸುಳಿವೊಂದು ಸಿಕ್ಕಿದೆ.
ಕಳೆದ ವರ್ಷ ಕೇರಳದ ತ್ರಿಶ್ಯೂರ್ನಲ್ಲಿ ಹರಿಯಾಣ ಮೂಲದ ಗ್ಯಾಂಗೊಂದು ಎಟಿಎಂ ಲೂಟಿ ಮಾಡಿತ್ತು. ಅದೇ ಗ್ಯಾಂಗ್ನ ಸದಸ್ಯರು ಅಥವಾ ಅದೇ ಗ್ಯಾಂಗ್ ಹೋಲುವ ಬೇರೊಂದು ತಂಡ ಕೋಟೆಕಾರಿನಲ್ಲೂ ದರೋಡೆ ನಡೆಸಿರಬಹುದೇ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ಕೇಂದ್ರೀಕರಿಸಿದ್ದಾರೆ.
ಹೀಗಾಗಿ ಒಂದು ತನಿಖಾ ತಂಡ ಉತ್ತರ ಭಾರತದ ರಾಜ್ಯಗಳಿಗೂ ತೆರಳಿರುವ ಮಾಹಿತಿ ಲಭ್ಯವಾಗಿದೆ.
ದರೋಡೆ ನಡೆಸಿದ ಬಳಿಕ ಆರೋಪಿಗಳು ಒಂದು ಕಾರಿನಲ್ಲಿ ಮಂಗಳೂರು ಕಡೆಗೆ ಬಂದಿದ್ದು, ಸಂಪೂರ್ಣ ಚಿನ್ನಾಭರಣ ಹಾಗೂ ನಗದು ಅದರಲ್ಲೇ ಇತ್ತು. ಇನ್ನೊಂದು ಕಾರು ಪೊಲೀಸ್ ತನಿಖೆಯ ಹಾದಿ ತಪ್ಪಿಸುವ ಉದ್ದೇಶದಿಂದ ಮಾತ್ರ ತಲಪಾಡಿಯ ಟೋಲ್ ಮೂಲಕ ಕೇರಳ ಕಡೆಗೆ ಸಂಚರಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಸಹಕಾರ ಸಂಘಕ್ಕೆ ಸಂಬಂಧಪಟ್ಟ ಹಲವರನ್ನು ವಿಚಾರಣೆ ನಡೆಸಲಾಗಿದೆ. ಈ ಹಿಂದೆ 2017ರಲ್ಲಿ ದರೋಡೆ ನಡೆದ ಸಂದರ್ಭದಲ್ಲಿ ಹಲವರನ್ನು ಅನುಮಾನ ಮೇಲೆ ವಶಕ್ಕೆ ಪಡೆಯಲಾಗಿತ್ತು. ಈಗ ಮತ್ತೆ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
ಪೊಲೀಸ್ ಇಲಾಖೆ ವತಿಯಿಂದ ಸೊಸೈಟಿ ಮುಖ್ಯಸ್ಥರ ಸಭೆ: ಕೋಟೆಕಾರು ದರೋಡೆ ಬಳಿಕ ದ.ಕ. ಪೊಲೀಸ್ ಇಲಾಖೆ ಸೊಸೈಟಿ ಮುಖ್ಯಸ್ಥರ ಸಭೆ ನಡೆಸಿದೆ. ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಉಪ್ಪಿನಂಗಡಿ ಪೊಲೀಸ್ ಠಾಣೆಗಳಲ್ಲಿ ಸಭೆ ನಡೆಸಲಾಗಿದೆ. ಬ್ಯಾಂಕ್, ಸೊಸೈಟಿಗಳ ಭದ್ರತೆ ಕುರಿತಂತೆ ಸೂಕ್ತ ಕಾನೂನು ತಿಳಿವಳಿಕೆ ನೀಡಲಾಗಿದೆ.
